ಚಿಂತಾಮಣಿ: ನಗರದಲ್ಲಿ ಕುಡಿಯುವ ಸಮಸ್ಯೆಯ ಪರಿಹಾರಕ್ಕಾಗಿ ಶಾಸಕ ಎಂ.ಕೃಷ್ಣಾರೆಡ್ಡಿ ವೈಯಕ್ತಿಕವಾಗಿ ಟ್ಯಾಂಕರ್ ಖರೀದಿ ಮಾಡಿ ಉಚಿತ ನೀರು ಪೂರೈಸುವ ಕಾರ್ಯಕ್ಕೆ ಬುಧವಾರ ಆಶ್ರಯ ಬಡಾವಣೆಯಲ್ಲಿ ಚಾಲನೆ ನೀಡಿದರು.
ಲಾಕ್ ಡೌನ್ನಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಈ ಹಿನ್ನಲೆಯಲ್ಲಿ ವೈಯಕ್ತಿಕವಾಗಿ ಟ್ಯಾಂಕರ್ ಖರೀದಿಸಿ ಉಚಿತ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದ್ದೆ. ಇಂದಿನಿಂದ ಉಚಿತ ನೀರು ಸರಬರಾಜು ಮಾಡುವ ಕಾರ್ಯ ಆರಂಭವಾಗಿದೆ. ಇದು ನಿರಂತರವಾಗಿ ನಡೆ ಯುತ್ತದೆ ಎಂದು ಶಾಸಕರು ತಿಳಿಸಿದರು.
ಕೊರೊನಾ ಸೋಂಕು ತಗುಲುವ ಹಿನ್ನಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮನೆಗಳಲ್ಲಿರಬೇಕು. ಯಾರು ಹೊರಗಡೆ ಬರಬಾರದು. ಸೋಂಕು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡಬೇಕು. ಅಗತ್ಯವಸ್ತುಗಳನ್ನು ಕೊಳ್ಳಲು ಅನಿವಾರ್ಯವಾಗಿ ಹೊರಗಡೆ ಬಂದಾಗ ಮಾಸ್ಕ್ ಧರಿಸಬೇಕು. ಮನೆಗೆ ಹೋದ ಕೂಡಲೇ ಸೋಪ್ ಉಪಯೋಗಿಸಿ ಕೈ ತೊಳೆಯಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗಗಳಲ್ಲೂ ಹಲವಾರು ಕಡೆ ನೀರಿನ ಕೊರತೆ ಬಗ್ಗೆ ದೂರುಗಳು ಬರುತ್ತಿವೆ. ನೀರಿನ ಸಮಸ್ಯೆ ಇರುವ ಕಡೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚಿ ಸಲಾಗಿದೆ ಎಂದರು.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಮಾಸ್ಕ್ ಧರಿಸಲು ಅನುಕೂಲವಾಗುವಂತೆ 4 ಸಾವಿರ ಮಾಸ್ಕ್ಗಳನ್ನು ವಿತರಿಸಲಾಗುವುದು. ಪೊಲೀಸ್ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಮಾಸ್ಕ್ಗಳನ್ನು ನೀಡುವುದರ ಮೂಲಕ ಚಾಲನೆ ನೀಡಲಾಗಿದೆ. ಕಾರ್ಯಕರ್ತರು ಮನೆ ಮನೆಗೂ ತೆರಳಿ ಮಾಸ್ಕ್ ಗಳನ್ನು ವಿತರಿಸುತ್ತಾರೆ ಶಾಸಕರು ತಿಳಿಸಿದರು.