ಚಿಕ್ಕಬಳ್ಳಾಪುರ: ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸುವ ಮೂಲಕ ಆದಿತ್ಯ ರಾವ್ ಒಬ್ಬ ಭಯೋತ್ಪಾದಕನ ರೀತಿ ವರ್ತಿಸಿದ್ದಾರೆ. ಯಾರೇ ತಪ್ಪು ಮಾಡಿದರೂ ತಪ್ಪೇ. ಆರೋಪಿಯ ವಿರುದ್ಧ ನಮ್ಮ ಸರ್ಕಾರ ನಿರ್ದಾಕ್ಷಿಣ್ಯ ಕ್ರಮತೆಗೆದುಕೊಳ್ಳುತ್ತದೆ. ಈ ವಿಚಾರದಲ್ಲಿ ಜಾತಿ, ಧರ್ಮ ನೋಡುವ ಪ್ರಶ್ನೆಯೇ ಇಲ್ಲ’ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಗಳೂರು ಪೊಲೀಸರು ಚಾಣಾಕ್ಷತನದಿಂದ ಬಾಂಬ್ ಪತ್ತೆ ಮಾಡಿ, ನಿಷ್ಕ್ರೀಯಗೊಳಿಸುವ ಮೂಲಕ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. ಹೀಗಾಗಿ ಪೊಲೀಸರ ಕಾರ್ಯ ದಕ್ಷತೆಯನ್ನು ನಾವು ಮೆಚ್ಚುತ್ತೇವೆ’ ಎಂದು ತಿಳಿಸಿದರು.