ಚಿಕ್ಕಬಳ್ಳಾಪುರ: ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಹದಗೆಟ್ಟ ರಸ್ತೆ, ಒಣಗಿದ ನೀರಿನ ತೊಟ್ಟಿ, ಗಬ್ಬು ನಾರುತ್ತಿರುವ ಶೌಚಾಲಯ, ಸೊಳ್ಳೆಗಳ ಕಾಟ, ರಾತ್ರಿ ವೇಳೆ ಉರಿಯದ ದೀಪಗಳು, ಎಲ್ಲೆಂದರಲ್ಲಿ ನಿಲ್ಲುವ ವಾಹನಗಳು... ಇದು ನಗರದ ಎಂಪಿಎಂಸಿ ಮಾರುಕಟ್ಟೆಯಲ್ಲಿ ಕಂಡು ಬರುವ ಚಿತ್ರಣ.
ಮಾರುಕಟ್ಟೆ ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ, ಗುಂಡಿಬಂಡೆ ತಾಲ್ಲೂಕಿನ ರೈತರು ಸಹ ನಿತ್ಯ ಹೂ, ತರಕಾರಿ ತರುತ್ತಾರೆ. ಆದರೆ ಮಾರುಕಟ್ಟೆ ಮಾರುಕಟ್ಟೆ ಮಾತ್ರ ಸಮಸ್ಯೆಗಳಿಂದ ಮುಳುಗಿದೆ.ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ಇಂದಿಗೂ ಆಗಿಲ್ಲ.
ಚಿಂತಾಮಣಿ, ಬಾಗೇಪಲ್ಲಿಯಲ್ಲಿ ಮಾರುಕಟ್ಟೆ ಇದ್ದರೂ ಇಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ ಎನ್ನುವ ಕಾರಣಕ್ಕೆ ಹೂವು, ತರಕಾರಿ ತರುತ್ತಾರೆ. ಆದರೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ. ಚರಂಡಿಗಳು ಇಲ್ಲದ ಕಾರಣ ಮಳೆಗಾಲದಲ್ಲಿ ಮಾರುಕಟ್ಟೆ ತ್ಯಾಜ್ಯದ ತೊಟ್ಟಿಯಂತಾಗುತ್ತದೆ.
‘ಮಳೆಗಾಲದಲ್ಲಿ ಮಾರುಕಟ್ಟೆಯೊಳಗೆ ಹೆಚ್ಚು ಇಡಲು ಅಸಹ್ಯವಾಗುತ್ತದೆ. ರಸ್ತೆ ಬದಿ ಸುರಿದ ತರಕಾರಿ, ಹೂವುಗಳು ಕೊಳೆತು ನಾರುತ್ತಿರುತ್ತದೆ. ಅನೇಕ ವರ್ಷಗಳಿಂದ ಹೀಗೆಯೇ ಇದೆ. ಮಾರುಕಟ್ಟೆ ಸಮಿತಿ ಗಮನವೇ ಹರಿಸುತ್ತಿಲ್ಲ. ಶೌಚಾಲಯವಿಲ್ಲದ ಮಾರುಕಟ್ಟೆಗೆ ಬರುವವರು ಪರಿತಪಿಸತ್ತಾರೆ’ ಎಂದು ಆರೂರು ಗ್ರಾಮದ ರೈತ ಕಾರ್ತಿಕ್ ಬೇಸರ ವ್ಯಕ್ತಪಡಿಸಿದರು.
ಮಂಗಳವಾರ, ಶುಕ್ರವಾರ ತರಕಾರಿ ವ್ಯಾಪಾರ ಹೆಚ್ಚು. ಮಾರುಕಟ್ಟೆಗೆ ಬರುವ ವಾಹನಗಳನ್ನು ಸರಿಯಾಗಿ ನಿಲ್ಲಿಸುವ ವ್ಯವಸ್ಥೆ ಇಲ್ಲ. ಎಲ್ಲೆಂದರಲ್ಲಿ ವಾಹನಗಳು ನಿಂತು ಜನರು ಪರದಾಡಬೇಕಾಗುತ್ತದೆ. ‘ವಾಹನಗಳನ್ನು ಸರಿಯಾಗಿ ನಿಯಂತ್ರಿಸುವ ವ್ಯವಸ್ಥೆ ಆಗಬೇಕು’ ಎನ್ನುವರು ಅವಲನಾಗೇನಹಳ್ಳಿ ಮಂಜುನಾಥ್.
‘ಮಾರುಕಟ್ಟೆ ಕಸ ತೆಗೆಯಲು ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಅವರು ಸರಿಯಾಗಿ ಕಸ ತೆಗೆಯುವುದೇ ಇಲ್ಲ. ವರ್ತಕರು, ರೈತರು ಮೂಗು ಮುಚ್ಚಿ ವ್ಯಾಪಾರ ಮಾಡಬೇಕಾಗಿದೆ.ಸಂಬಂಧಪಟ್ಟವರು ಇನ್ನಾದರೂ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು’ ಎಂದು ವರ್ತಕ ನಾರಾಯಣಸ್ವಾಮಿ ಹೇಳಿದರು.
‘ಮಾರುಕಟ್ಟೆಯೊಳಗೆ ಸರಿಯಾಗಿ ಬೀದಿದೀಪಗಳನ್ನು ಹೆಸರಿಗಷ್ಟೇ ಅಳವಡಿಸಿದಂತಿವೆ. ಅಲ್ಲೊಂದು, ಇಲ್ಲೊಂದು ಉರಿಯುವುದು ಬಿಟ್ಟರೆ ಉಳಿದಂತೆ ಮಾರುಕಟ್ಟೆ ರಾತ್ರಿಯಾದರೆ ಕತ್ತಲ ಗವಿಯಾಗುತ್ತದೆ. ರಾತ್ರಿ ಮಾರುಕಟ್ಟೆಗೆ ಭದ್ರತೆಯ ವ್ಯವಸ್ಥೆ ಒದಗಿಸಬೇಕು’ ಎಂದು ಆಗ್ರಹಿಸಿದರು.
-–ಕೆಂಪೇಗೌಡ ಎನ್.ವೆಂಕಟೇನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.