ಚಿಂತಾಮಣಿ: ಯುವಜನರು ಸಣ್ಣಪುಟ್ಟ ವಿಷಯಗಳನ್ನೇ ಪ್ರಮುಖವಾಗಿಸಿ ಕೊಂಡು ಕಾಲಹರಣ ಮಾಡುವುದರ ಬದಲು ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆ ಬಲಪಡಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗಾಜಲಹಳ್ಳಿ ಶಾಲೆ ಶಿಕ್ಷಕ ಎನ್.ಕೆ.ನರಸಿಂಹಪ್ಪ ತಿಳಿಸಿದರು.
ತಾಲ್ಲೂಕಿನ ಪೆರುಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಿಂದ್ರಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಎನ್ಎಸ್ಎಸ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಯುವಜನರು ದೇಶದ ಉಜ್ವಲ ಭವಿಷ್ಯ ಮತ್ತು ಸಂಪತ್ತು. ಯುವಜನರ ಮೇಲೆ ಹೆಚ್ಚಿನ ಹೊಣೆಯಿದೆ~ ಎಂದರು.
`ದುಶ್ಚಟಗಳನ್ನು ದೂರಗೊಳಿಸಿ, ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳ ಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿ ಕೊಳ್ಳುವುದರ ಮೂಲಕ ದೇಶಸೇವೆಗೆ ಮುಂದಾಗಬೇಕು~ ಎಂದರು.
ಶಿಬಿರಾಧಿಕಾರಿ ಸುಬ್ರಮಣಿ ಮಾತ ನಾಡಿ, `ಜೀವನದ ಜಂಜಾಟ ಮತ್ತು ಇನ್ನಿತರ ಕಾರಣಗಳಿಂದ ಬಹುತೇಕ ಮಂದಿ ಶುಚಿಯಾದ ಪರಿಸರದತ್ತ ಹೆಚ್ಚಿನ ಗಮನಹರಿಸುವುದಿಲ್ಲ. ಪ್ರತಿ ಯೊಬ್ಬರಲ್ಲೂ ಪರಿಸರ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು~ ಎಂದರು.
ಪ್ರಾಂಶುಪಾಲ ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಚಂದ್ರನ್, ಬೈರಾರೆಡ್ಡಿ, ಆಂಜನೇಯ, ಅಂಜಪ್ಪ, ಗ್ರಾಮದ ಮುಖಂಡರಾದ ಕೃಷ್ಣೇಗೌಡ, ಗೋಪಾಲಗೌಡ, ಮುನಿರಾಜು, ಮುನಿನಾರಾಯಣಪ್ಪ ಮುಂತಾದವರು ಉಪಸ್ಥಿತರಿದ್ದರು.