ಗೌರಿಬಿದನೂರು: ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಪೂರ್ಣವಾಗಿ ನಿಷೇಧಿಸಿದ್ದರೂ ಉತ್ತರ ಪಿನಾಕಿನಿ ನದಿ, ಕುಮದ್ವತಿ ನದಿಯಲ್ಲಿ ರಾತ್ರಿ ವೇಳೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತಾಲ್ಲೂಕಿನಲ್ಲಿ ಮಳೆಯಾಗದೆ ಅಂತರ್ಜಲ ಸಂಪೂರ್ಣ ಬತ್ತಿ ಹೋಗಿ ಕುಡಿಯವ ನೀರಿಗೂ ಸಹ ಹಾಹಾಕಾರ ಉಂಟಾಗಿದೆ.
ಉತ್ತರ ಪಿನಾಕಿನಿ ನದಿಯಲ್ಲಿ ಮರಳು ಸಾಗಾಣಿಕೆಯಿಂದ ನೂರಾರು ಅಡಿಗಳ ಅಳದ ಗುಂಡಿಗಳು ನಿರ್ಮಾಣವಾಗಿವೆ ಸ್ಥಳೀಯರು ಆರೋಪಿಸಿದ್ದಾರೆ.
ಅಕ್ರಮ ಮರಳು ದಂಧೆ ನಡೆಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹೇಳಿಕೆ ನೀಡುತ್ತಾರೆ.
ಆದರೆ ಅಕ್ರಮ ಮರಳು ದಂಧೆ ಕಡಿವಾಣ ಹಾಕಿಲ್ಲ. ಪೊಲೀಸರು ಪರೋಕ್ಷವಾಗಿ ಮರಳು ಸಾಗಾಣಿಕೆಗೆ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗೌರಿಬಿದನೂರು ಉತ್ತರ ಪಿನಾಕಿನಿ ಹಾಗೂ ಕುಮಧ್ವತಿ ನದಿಗಳಿಂದ ಹಗಲಿನಲ್ಲಿ ಎತ್ತಿನ ಗಾಡಿಗಳಲ್ಲಿ ಹಾಗೂ ಆಟೊಗಳಲ್ಲಿ ಮರಳು ಸಾಗಾಣಿಕೆ ಮಾಡಿದರೆ ರಾತ್ರಿ ಸಮಯದಲ್ಲಿ ಟ್ರ್ಯಾಕ್ಟರ್ ಗಳಲ್ಲಿ ಸಾಗಾಣಿಕೆ ಮಾಡುತ್ತಾರೆ. ಎಷ್ಟೇ ಬಿಗಿ ಕ್ರಮ ಕೈಗೊಂಡರೂ ಮರಳುಗಾರಿಕೆ ಮಾತ್ರ ನಿಲ್ಲುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ