ಗುಡಿಬಂಡೆ: ತಾಲ್ಲೂಕಿನ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ನನ್ನ ಪ್ರಮುಖ ಗುರಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣ, ಅಂಬೇಡ್ಕರ್ ನಗರ, ತಿರುಮಣಿ, ವರ್ಲಕೊಂಡ ಮತ್ತು ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಗುಡಿಬಂಡೆ ಮತ್ತು ಬಾಗೇಪಲ್ಲಿಯ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನಲ್ಲಿ ಹೆಚ್ಚು ಫ್ಲೋರೈಡ್ ಅಂಶ ಇರುವುದರಿಂದ ಸಾರ್ವಜನಿಕರಿಗೆ ಮೊಣಕಾಲು ನೋವು, ಹಲ್ಲು ತೊಂದರೆ, ಬೇಗ ಮುಪ್ಪಾಗುವಂತೆ ಕಾಣುತ್ತಿದ್ದಾರೆ. ಈಗಾಗಲೇ ಹಲವಾರು ಗ್ರಾಮಗಳಲ್ಲಿ ನೀರಿನ ಘಟಕಗಳನ್ನು ಸ್ಥಾಪಿಸಿ ಜನರಿಗೆ ಕುಡಿಯಲು ಶುದ್ಧ ನೀರನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿದರು.
ಬೀಚಗಾನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಾಗಿ ₹ 30 ಲಕ್ಷ ಅನುದಾನ ಹಾಗೂ ಬೀಚಗಾನಹಳ್ಳಿ ಗ್ರಾಮದಿಂದ ರೇಣುಮಾಕಲಹಳ್ಳಿಯ ವರೆಗೆ 4 ಕಿಮೀ ರಸ್ತೆ ಅಭಿವೃದ್ಧಿಗೆ ₹ 2.5 ಕೋಟಿ, ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಗೆ ₹ 1.5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಜತೆಗೆ ಬೀಚಗಾನಹಳ್ಳಿ ಗ್ರಾಮದ ಗಡಿನಾಡ ಭವನದ ಕಾಂಪೌಂಡ್ ಮತ್ತು ಒಂದು ಕೊಠಡಿಗೆ ₹ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.
ಅಲ್ಲದೇ ಪಟ್ಟಣದಲ್ಲಿ ಮುಖ್ಯ ರಸ್ತೆ ಅಭಿವೃದ್ಧಿ, ರಸ್ತೆ ಮತ್ತು ಚರಂಡಿ ನಿರ್ಮಾಣ, ಸುರಸದ್ಮ ಗಿರಿ ಬೆಟ್ಟದ ಅಭಿವೃದ್ಧಿ, ಕುಡಿಯುವ ನೀರು, ಶಿಕ್ಷಣ, ಕಟ್ಟಡಗಳ ಕಾಮಗಾರಿಗಳು ಪೂರ್ಣವಾಗಿದೆ. ಇನ್ನೂ ಬಾಕಿ ಇರುವ ಕಾಮಗಾರಿಗಳು ಚಾಲ್ತಿಯಲ್ಲಿದ್ದು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ವರಲಕ್ಷ್ಮಿ ಎವಿಟಿ ನಾರಾಯಣಸ್ವಾಮಿ, ಗಾಯಿತ್ರಿ ನಂಜುಂಡಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ವರಲಕ್ಷ್ಮಿ ಕೃಷ್ಣೆಗೌಡ, ಉಪಾಧ್ಯಕ್ಷ ಬೈರಾರೆಡ್ಡಿ, ಸದಸ್ಯ ಪಿ.ಸಿ.ಮಂಜುನಾಥ ವರ್ಲಕೊಂಡ ಗ್ರಾ.ಪಂ ಅಧ್ಯಕ್ಷೆ ಮುನಿಬೈಯಮ್ಮ ಅಕ್ಕಲರೆಡ್ಡಿ, ಉಪಾಧ್ಯಕ್ಷ ರುಕ್ಮಿಣಮ್ಮ ಶಿವಪ್ಪ, ಸದಸ್ಯರಾದ ರಾಮಕ್ಕ, ಅನಿತಾ, ಪಿ.ಸಿ. ರವಿಂದ್ರನಾಥ,ಶ್ರಾವಣಿ, ಸುಮಿತ್ರಮ್ಮ, ವಿಜಯ್ಕುಮಾರ್, ಶ್ರೀರಾಮ್, ಗಂಗರಾಜು, ಲಕ್ಷ್ಮಿನರಸಮ್ಮ, ರಾಧಮ್ಮ, ವರ್ಲಕೊಂಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದೇವರಾಜು, ವೆಂಕಟೇಶ್, ವಿ.ಎ.ರಮೇಶ್, ಪಿಡಿಓ ಪಣೀಂದ್ರ, ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಹೇಶ, ಪಿಡಿಓ ಸುಬ್ರಮಣಿ ಮತ್ತಿತರರು ಉಪಸ್ಥಿತರಿದ್ದರು.