ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬಹುತೇಕ ರೈತರು ಬಾಳೆ, ಶುಂಠಿ, ಸುವರ್ಣಗೆಡ್ಡೆ ಮತ್ತಿತರ ವಾಣಿಜ್ಯ ಬೆಳೆಗಳನ್ನು ನಾಟಿ ಮಾಡಲು ವ್ಯಾಪಾರಸ್ಥರಿಂದ ಮುಂಗಡವನ್ನು ಪಡೆದುಕೊಳ್ಳುತ್ತಿದ್ದರು. ಪ್ರಸ್ತುತ ವಾಣಿಜ್ಯ ಬೆಳೆಗಳನ್ನು ಸಮರ್ಪಕವಾಗಿ ಮಾರಾಟವಾಗದಿರುವುದರಿಂದ ವ್ಯಾಪಾರಸ್ಥರು ಯಾವುದೇ ಮುಂಗಡ ನೀಡಲು ಮುಂದೆ ಬರುತ್ತಿಲ್ಲ. ಇದರಿಂದ ಈ ಬೆಳೆಗಳ ನಾಟಿ ಕಾರ್ಯವೂ ಸ್ಥಗಿತಗೊಂಡಿದೆ. ವ್ಯಾಪಾರಸ್ಥರು ಮತ್ತು ಬೆಳೆಗಾರರ ನಡುವೆ ಇದ್ದ ವ್ಯವಹಾರದ ಕೊಂಡಿ ಕಳಿಚಿ ಬಿದ್ದಿರುವುದರಿಂದ ಹಣಕಾಸಿನ ಸಮಸ್ಯೆಯನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಿಂದಾಗಿ ಹೊಸದಾಗಿ ಬೆಳೆ ನಾಟಿ ಮಾಡಲು ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜ ಮತ್ತಿತತರ ಪರಿಕರಗಳನ್ನು ಕೊಳ್ಳಲು ಸಾಧ್ಯವಾಗದೆ ಭವಿಷ್ಯದ ಚಿಂತೆ ಕೃಷಿಕರನ್ನು ಕಾಡುತ್ತಿದೆ.