ಅಜ್ಜಂಪುರ: ‘ವಿದ್ಯಾರ್ಥಿಗಳ ನಿಜವಾದ ಆಸ್ತಿ ಅವರು ಕಲಿತ ಕೌಶಲಗಳೇ ಹೊರತು, ಪಡೆದ ಅಂಕಗಳಲ್ಲ’ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಲ್ಪೆ ಮಧ್ವರಾಜ್ ಚಾರಿಟಬಲ್ ಟ್ರಸ್ಟ್, ಕಾಲೇಜು ಕೌಶಲ ಅಭಿವೃದ್ಧಿ ಘಟಕ, ವೃತ್ತಿವರ್ಧಕ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಜಂಟಿಯಾಗಿ ಆಯೋಜಿಸಿದ್ದ ‘ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
‘ಕಾಲೇಜು ಕಲಿಕೆಗೂ, ಉದ್ಯೋಗದ ನಿರೀಕ್ಷೆಗೂ ಭಾರಿ ಅಂತರವಿದೆ. ಜೀವನದಲ್ಲಿ ಉನ್ನತ ಮಟ್ಟದ ಉದ್ಯೋಗಗಳನ್ನು ಪಡೆಯಲು ಈ ಅಂತರ ತುಂಬಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ’ ಎಂದರು.
ಕಾಲೇಜು ಕೌಶಲಾಭಿವೃದ್ಧಿ ಘಟಕ ಸಂಚಾಲಕ ಆರ್. ಆನಂದ್, ‘ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಉತ್ತೇಜಿಸಲು ಹಲವು ಕಾರ್ಯಕ್ರಮ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಸದ್ಬಳಕೆ ಮಾಡಿಕೊಂಡು, ಉನ್ನತ ಜೀವನ ರೂಪಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಸಹ ಪ್ರಾಧ್ಯಾಪಕ ಮಹಾಲಿಂಗಪ್ಪ, ‘ಪದವಿ ಪ್ರಮಾಣ ಪತ್ರ ಎಂಬುದು ಊಟದ ತಟ್ಟೆಯಿದ್ದಂತೆ, ಅದರಲ್ಲಿ ಅನ್ನ ಗಳಿಸಬೇಕೆಂದರೆ ಕೌಶಲ ಅಗತ್ಯ. ಇವುಗಳ ಕಲಿಕೆಯಲ್ಲಿ ಜಗತ್ತನ್ನು ಪರೀಕ್ಷಿಸುವುದು ಮುಖ್ಯ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ಟ್ರಸ್ಟ್ನ ಸ್ವಸ್ತಿಕ್ ಮತ್ತು ತಂಡ ಸಮೂಹ ನಾಯಕತ್ವ ಮತ್ತು ಸಂದರ್ಶನ ಕೌಶಲಗಳ ಕುರಿತು ವಿದ್ಯಾರ್ಥಿಗಳಿಗೆ ತರಗತಿ ಹಾಗೂ ಚಟುವಟಿಕೆ ನಡೆಸಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಬಿ.ಎಂ.ರಘು, ಮೋಹನ್ ಕುಮಾರ್, ಉಪನ್ಯಾಸಕ ಎನ್.ಎಲ್.ಆನಂದ್, ಸುಮ ಇದ್ದರು.
ವಿದ್ಯಾರ್ಥಿಗಳಲ್ಲಿ ಬದ್ಧತೆ ತಾಳ್ಮೆ ಹಾಗೂ ಸಂವಹನ ಕೌಶಲಗಳು ವೃತ್ತಿ ಜೀವನಕ್ಕೆ ಅಗತ್ಯವಾಗಿದೆ. ಇದನ್ನು ಕೇವಲ ಶಾಲಾ ಕಾಲೇಜುಗಳಿಂದ ಮಾತ್ರವಲ್ಲದೆ ಹೊರಗಿನ ಪ್ರಪಂಚದಿಂದಲೂ ಕಲಿಯಬೇಕುನಾಗೇಶ್ ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶ ಸಂಚಾಲಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.