ಚಿಕ್ಕಮಗಳೂರು: ತಾಲ್ಲೂಕಿನ ಹಿರೇಗೌಜ ಗ್ರಾಮದ ಬೆಳೆಗಾರ ಅಂಗಡಿ ಬಸವರಾಜು ಅವರು ಎಲೆ ಕೋಸಿಗೆ ಬೆಲೆ ಕುಸಿತದಿಂದ ಕಂಗಾಲಾಗಿ ಹೊಲದಲ್ಲಿದ್ದ ಬೆಳೆಯನ್ನು ಮಣ್ಣುಪಾಲು ಮಾಡಿದ್ದಾರೆ.
ಬಸವರಾಜು ಪುತ್ರ ಪ್ರಕಾಶ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ. ‘ಒಂದು ಎಕರೆಯಲ್ಲಿ ಎಲೆಕೋಸು ಬೆಳೆದಿದ್ದೆವು. ಚೀಲ (60ಕೆ.ಜಿ) ಎಲೆಕೋಸಿಗೆ ₹ 30ರಿಂದ ₹ 60ವರೆಗೆ ಬೆಲೆ ಇದೆ. ಎರಡು ತಿಂಗಳ ಹಿಂದೆ ಚೀಲಕ್ಕೆ ₹ 200 ಇತ್ತು. ಈಗ ಬೆಲೆ ತೀವ್ರ ಕುಸಿದಿದೆ. ಕೈಗೆ ಬಂದ ತುತ್ತು ಬಾಯಿ ಬರದಂತಾಗಿದೆ’ ಎಂದು ಗೋಳು ತೋಡಿಕೊಂಡರು.
‘ಎಲೆ ಕೋಸು ಬೆಳೆಯಲು ಸುಮಾರು ₹ 40 ಸಾವಿರ ಖರ್ಚು ಮಾಡಿದ್ದೆವು. ಈಗಿನ ಬೆಲೆಗೆ ಮಾರಿದರೆ ಬೆಳೆ ಕಟಾವು ಮಾಡಿದ ಖರ್ಚು ಸಿಗಲ್ಲ. ಹೀಗಾಗಿ, ಟ್ರಾಕ್ಟರ್ ಬಳಸಿ ಹೊಲದಲ್ಲೇ ಬೆಳೆಯನ್ನು ಮಣ್ಣುಪಾಲು ಮಾಡಿದ್ದೇವೆ. ಎಲೆ ಕರಗಿ ಗೊಬ್ಬರವಾಗುತ್ತದೆ’ ಎಂದು ಹೇಳಿದರು.