ಚಿಕ್ಕಮಗಳೂರು: ಒಂದು ಕಾಲದಲ್ಲಿ ಭತ್ತದ ಕಣಜ, ಅನ್ನದ ಬಟ್ಟಲಾಗಿದ್ದ ಮಲೆನಾಡು ಈಗ ಬರಿದಾಗಿದೆ. ಭತ್ತದ ಬೆಳೆ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದ್ದು, ಹದಿನೈದು ವರ್ಷಗಳಲ್ಲಿ 30 ಸಾವಿರ ಹೆಕ್ಟೇರ್ನಲ್ಲಿ ಭತ್ತದ ಕ್ಷೇತ್ರ ಕಣ್ಮರೆಯಾಗಿದೆ.
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲ್ಲೂಕಿನಲ್ಲಿ ಮಳೆ ಆಶ್ರಯದಲ್ಲಿ ಭತ್ತ ಬೆಳೆಯುತ್ತಿದ್ದರೆ, ತರೀಕೆರೆ ತಾಲ್ಲೂಕಿನಲ್ಲಿ ನೀರಾವರಿ ಆಶ್ರಯದಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದೆ.
ಕೂಲಿ ಕಾರ್ಮಿಕರ ಕೊರತೆ, ಹವಾಮಾನ ವೈಪರಿತ್ಯದಿಂದ ರೈತರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ವಾಣಿಜ್ಯ ಬೆಳೆಯತ್ತ ಒಲವು ತೋರುತ್ತಿದ್ದು, ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಶುಂಠಿ, ಕಾಫಿ ಮತ್ತು ಅಡಿಕೆ ಬೆಳೆಗಳು ಆಕ್ರಮಿಸಿಕೊಳ್ಳುತ್ತಿವೆ.
ಜಿಲ್ಲೆಗೆ ಸಾಕಾಗುವಷ್ಟು ಅನ್ನ ಇದೇ ನೆಲದಲ್ಲಿ ಬೆಳೆಯಲಾಗುತ್ತಿತ್ತು. ಈಗ ಅಕ್ಕಿಯನ್ನು ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮಲೆಬೆನ್ನೂರು, ದಾವಣಗೆರೆ, ಗಂಗಾವತಿ, ಕಾರಟಗಿ, ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಿಂದ ಜಿಲ್ಲೆಗೆ ಅಕ್ಕಿ ಪೂರೈಕೆಯಾಗುತ್ತಿದೆ. ಭತ್ತ ಬೆಳೆದು ನಾಡಿಗೆ ಅನ್ನ ನೀಡುತ್ತಿದ್ದ ರೈತರು ಈಗ ದುಬಾರಿಯಾದರೂ ಅಕ್ಕಿ ಖರೀದಿಸಿ ತರಬೇಕಾದ ಸ್ಥಿತಿ ಇದೆ.
ಜಿಲ್ಲೆಯಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲೇ ಹೆಚ್ಚು ಭತ್ತದ ಬೆಳೆ ಬೆಳೆಯಲಾಗುತ್ತಿತ್ತು. 2009–10ನೇ ಸಾಲಿನಲ್ಲಿ 10 ಸಾವಿರ ಹೆಕ್ಟೇರ್ನಲ್ಲಿ ಇದ್ದ ಭತ್ತದ ಬೆಳೆ ಈಗ 2 ಸಾವಿರ ಹೆಕ್ಟೇರ್ಗೆ ಕುಸಿತವಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9,663 ಹೆಕ್ಟೇರ್ನಲ್ಲಿ ಇದ್ದ ಭತ್ತದ ಬೆಳೆ ಈಗ 1,950 ಹೆಕ್ಟೇರ್ಗೆ ಇಳಿಕೆಯಾಗಿದೆ. ಇನ್ನೂ ನೀರಾವರಿ ಆಶ್ರಯದಲ್ಲಿ ತರೀಕೆರೆ ತಾಲ್ಲೂಕಿನಲ್ಲಿ 7,750 ಹೆಕ್ಟೇರ್ನಲ್ಲಿ ಇದ್ದ ಭತ್ತದ ಬೆಳೆ ಈಗ 1,055 ಹೆಕ್ಟೇರ್ಗೆ ಇಳಿಕೆಯಾಗಿದೆ.
ಭತ್ತದ ಬೆಳೆ ಇದ್ದ ಜಾಗಕ್ಕೆ ಅಡಿಕೆ, ಕಾಫಿ, ಮೆಣಸು, ಜನವಸತಿ ಬಡಾವಣೆಗಳು ಆಕ್ರಮಿಸಿಕೊಳ್ಳುತ್ತಿವೆ. ಅನ್ನದ ಬಟ್ಟಲು ಖಾಲಿಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ತರಿಸಿದೆ.
ಪೂರಕ ಮಾಹಿತಿ: ಅನಿಲ್ ಮೊಂತೆರೊ, ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಎಚ್.ಎಂ.ರಾಜಶೇಖರಯ್ಯ, ಕೆ.ವಿ.ನಾಗರಾಜ್, ಕೆ.ಎನ್.ರಾಘವೇಂದ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.