ಚಿಕ್ಕಮಗಳೂರು: ‘ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ (ಆ. 30) ತಜ್ಞರ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವರು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತಜ್ಞರ ಸಮಿತಿಯ ಹಸಿರು ನಿಶಾನೆ ತೋರಿದರೆ ಭೌತಿಕ ತರಗತಿ ಆರಂಭಿಸಲಾಗುವುದು. ಭೌತಿಕ ತರಗತಿ ಆರಂಭಿಲು ಶಿಕ್ಷಣ ಇಲಾಖೆ ತಯಾರಿ ಮಾಡಿಕೊಂಡಿದೆ’ ಎಂದು ಉತ್ತರಿಸಿದರು.
‘ಈಗ ಆರರಿಂದ ಎಂಟನೇ ತರಗತಿಯವರಿಗೆ ಆರಂಭಿಸಿ, ನಂತರ ಒಂದರಿಂದ ಐದನೇ ತರಗತಿಯವರಿಗೆ ಆರಂಭಿಸಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದೆಲ್ಲದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ಪ್ರತಿಕ್ರಿಯಿಸಿದರು.
‘ಐದು ಜಿಲ್ಲೆಗಳಲ್ಲಿ ಶಾಲೆ (9ರಿಂದ 12 ನೇ ತರಗತಿ) ಆರಂಭಿಸಿರಲಿಲ್ಲ. ಈ ಜಿಲ್ಲೆಗಳಲ್ಲಿ ಈಗ ಕೋವಿಡ್ ದೃಢ ಪ್ರಮಾಣ ಶೇ 2ಕ್ಕಿಂತ ಕಡಿಮೆ ಇದೆ. ಜಿಲ್ಲಾಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ಶಾಲೆಗಳನ್ನು ಆರಂಭಿಸಬೇಕು ಎಂಬ ಅಭಿಪ್ರಾಯವನ್ನು ಎಲ್ಲರೂ ವ್ಯಕ್ತಪಡಿಸಿದ್ದಾರೆ’ ಎಂದರು.