ಚಿಕ್ಕಮಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರಿಗೆ ಕಣ್ಣು ಮುಚ್ಚಿದಾಕ್ಷಣ ವಿಧಾನಸೌಧದ ಮೂರನೇ ಮಹಡಿ ಕಾಣಿಸುತ್ತದೆ. ಲೋಕಸಭೆ ಚುನಾವಣೆಯೊಳಗೆ ವಾಮಮಾರ್ಗದಲ್ಲಿಯಾದರೂ ಮುಖ್ಯಮಂತ್ರಿ ಆಗಬೇಕು ರಹಸ್ಯ ಕಾರ್ಯತಂತ್ರ ಅವರದ್ದು’ ಎಂದು ಕುಟುಕಿದರು.
‘ಟಿಪ್ಪು ಜಯಂತಿ ನಾಲ್ಕು ವರ್ಷದಿಂದ ಆಚರಿಸುತ್ತಿದ್ದೇವೆ. ಬಿಜೆಪಿಯವರ ಮಾತಿಗೆ ತಾಳಮೇಳ ಇಲ್ಲ. ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಅವರ ಮಾತಿಗೆ ಕಿಮ್ಮತ್ತು ಇಲ್ಲ’ ಎಂದು ಉತ್ತರಿಸಿದರು.
‘ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಇದ್ದಿದ್ದಕ್ಕೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದೆವು. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡಿದ ನಂತರ ಹೇಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.