ನರಸಿಂಹರಾಜಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜನಸಾಮಾನ್ಯರಿಗಾಗಿ ಜಾರಿಗೆ ತಂದ ಕಾರ್ಯಕ್ರಮಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಗ್ರಾಮದಲ್ಲೂ ಮತದಾರರಿಗೆ ತಿಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.
ಇಲ್ಲಿನ ತಾಲ್ಲೂಕು ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಶನಿವಾರ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಇಂದಿರಾಗಾಂಧಿ ಅವರಿಗೂ ಚಿಕ್ಕಮಗಳೂರು ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಜಿಲ್ಲೆಯು ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿತ್ತು. ಇಂದಿರಾಗಾಂಧಿ ಅವರು ದಿಟ್ಟ ಮಹಿಳೆಯಾಗಿದ್ದು, ಉಕ್ಕಿನ ಮಹಿಳೆ ಎಂದು ಹೆಸರು ಪಡೆದಿದ್ದರು. ಅವರು ಜಾರಿಗೆ ತಂದ ಕಾರ್ಯಕ್ರಮಗಳನ್ನು ಕಾರ್ಯಕ್ರಮಗಳನ್ನು ಜೀವಂತವಾಗಿಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಈ.ಸಿ.ಜೋಯಿ ಮಾತನಾಡಿ, ಇಂದಿರಾಗಾಂಧಿ ಅವರ ಆದರ್ಶವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕು. ಕಾಂಗ್ರೆಸ್ ಸಂಸ್ಕೃತಿ ಬಿಜೆಪಿ ಸಂಸ್ಕೃತಿಗಿಂತ ಭಿನ್ನವಾಗಿದೆ. ಇಂದಿರಾಗಾಂಧಿ ಅವರ ಆದರ್ಶ, ಸಿದ್ಧಾಂತವನ್ನು ಜಾರಿಗೆ ತಂದರೆ ಅದು ಅವರಿಗೆ ನೀಡುವ ಗೌರವ ಎಂದರು.