‘ಕೋವಿಡ್ ಸೋಂಕಿಗೆ ನಿರ್ದಿಷ್ಟ ಔಷಧಿಯಿಲ್ಲ. ಆದರೆ, ಅದಕ್ಕಾಗಿ ಅಧೀರರಾಗಬೇಕಿಲ್ಲ. ನಮ್ಮ ಸ್ವಯಂ ಧೈರ್ಯವೇ ನಮ್ಮನ್ನು ಅರ್ಧ ಗುಣಮುಖರನ್ನಾಗಿಸುತ್ತದೆ. ಬೇರೆ ಯಾವುದೇ ಕಾಯಿಲೆಗಿಂತ ಬಹುವೇಗವಾಗಿ ಕೊರೊನಾ ಹರಡುತ್ತದೆ. ಹಾಗಾಗಿ, ಕೂಡಲೇ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆಗೆ ಒಳಪಡಬೇಕು. ಅದು ನಮ್ಮ ಸಾಮಾಜಿಕ ಜವಾಬ್ದಾರಿಯೂ ಹೌದು. 14 ದಿನಗಳ ಕಾಲ ಒಂದೇ ಕೋಣೆಯಲ್ಲಿ ಚಿಕಿತ್ಸೆಗೊಳಪಡುವುದು ಒಂದಿಷ್ಟು ಕಷ್ಟಕರವಾದರೂ ಮನಸ್ಸನ್ನು ಬಿಗಿ ಹಿಡಿಯಬೇಕು. ಏಕೆಂದರೆ ಅಲ್ಲಿ ಒಬ್ಬರೇ ಇರುತ್ತೇವೆ. ನಮ್ಮಲ್ಲಿರುವ ಮಾರಕ ವೈರಸ್ ಅನ್ನು ಬೇರೆಯವರಿಗೆ ವರ್ಗಾಯಿಸುವುದನ್ನು ತಪ್ಪಿಸಿ, ನಾವು ಸಮಾಜಕ್ಕೆ ಮಹತ್ತರ ಕೊಡುಗೆಯೊಂದನ್ನು ನೀಡುತ್ತಿದ್ದೇವೆ ಎಂಬ ಚಿಂತನೆ ನಮಗೆ ನೈತಿಕ ಸ್ಥೈರ್ಯ ನೀಡಿ ಬೇಸರ ಕಳೆಯುತ್ತದೆ’ ಎನ್ನುತ್ತಾರೆ ಡಾ.ಉದಯ್.