ಅಜ್ಜಂಪುರ: ತಾಲ್ಲೂಕಿನ ಸೊಕ್ಕೆ ಗ್ರಾಮದ ಕುಮಾರಪ್ಪ ಅವರ ಮನೆಯ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದ ನಾಲ್ವರಿಗೆ ಸುಟ್ಟ ಗಾಯಗಳಾಗಿವೆ.
ಮನೆ ಮತ್ತು ಅಂಗಡಿ ಹೊಂದಿದ್ದ ಕುಮಾರಪ್ಪ ಅವರ ಮನೆಯ ಸಿಲಿಂಡರ್ ಸ್ಫೋಟದಿಂದ ಉಂಟಾದ ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ದಿನಸಿ ಮತ್ತು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ತರೀಕೆರೆಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.
ಬೆಂಕಿ ನಂದಿಸಲು ಪ್ರಯತ್ನಿಸಿದ ಕುಮಾರಪ್ಪ, ಸಂಬಂಧಿಗಳಾದ ಕಾರ್ತೀಕ್, ಗಿರೀಶ್ ಮತ್ತು ಗ್ರಾಮಸ್ಥರಾದ ಶಾಂತವೀರಪ್ಪ ಅವರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಎಲ್ಲ ವಸ್ತುಗಳು ಭಸ್ಮವಾಗಿವೆ. ಬೀರುವಿನಲ್ಲಿದ್ದ ನಗದು ಸುಟ್ಟು ಹೋಗಿದ್ದು, ಆಭರಣಗಳು ಕರಗಿ ಹೋಗಿವೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮನೆಯ ಶೋಭಾ ಅಳಲು ತೋಡಿಕೊಂಡರು.
ಘಟನಾ ಸ್ಥಳಕ್ಕೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಪ್ಪೇಶ್, ಖಾದರ್ ಸಾಬ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.