ಕೈಯಲ್ಲಿ ಪಾಶ, ಅಂಕುಶ, ಪುಷ್ಪಬಾಣ ಮತ್ತು ಬಿಲ್ಲುಗಳನ್ನು ಧರಿಸಿ ಕರುಣಪೂರಿತ ದೃಷ್ಟಿಯುಳ್ಳವಳಾಗಿ, ಸರ್ವಾಲಂಕಾರ ಭೂಷಿತಳಾಗಿ, ಕಾಮೇಶ್ವರನ ಪ್ರಾಣಕಾಂತೆಯಾಗಿ ಭಕ್ತರಿಗೆ ಕಾಣಿಸಿದಳು.
ಶಾರದೆಯ ಸನ್ನಿಧಿಯಲ್ಲಿ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಅವರಿಂದ ಶಾರದಾಂಬೆಗೆ ವಿಶೇಷಪೂಜೆ, ಪಾರಾಯಣಗಳು, ಜಪಗಳು, ಕುಮಾರೀಪೂಜೆ, ಸುವಾಸಿನೀ ಪೂಜೆ ಮುಂತಾದ ಧಾರ್ಮಿಕ ಪ್ರಕ್ರಿಯೆಗಳು ನೆರವೇರಿದವು. ರಾತ್ರಿ ಸರಳವಾಗಿ ದರ್ಬಾರು ನಡೆಸಿದರು.
ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್ಗಳಿಗೆ ರಜಾವಿದ್ದ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಪ್ರವಾಸಿಗರು ಶಾರದೆಯ ದರ್ಶನ ಪಡೆದು ಭೋಜನ ಸ್ವೀಕರಿಸಿದರು. ಕೆರೆಕಟ್ಟೆ ಹಾಗೂ ಆಗುಂಬೆ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು.
ಕಿರಾಳಮ್ಮ ದೇವಾಲಯ: ದುರ್ಗಾಷ್ಟಮಿ ಪೂಜೆ
ಅಜ್ಜಂಪುರ: ನವರಾತ್ರಿ ಹಿನ್ನೆಲೆಯಲ್ಲಿ ಶನಿವಾರ ಗ್ರಾಮ ದೇವತೆ ಕಿರಾಳಮ್ಮ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು.
ಅರ್ಚಕ ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ತಾಯಿ ಕಿರಾಳಮ್ಮ ದೇವಿಗೆ ಪಂಚಾಮೃತ ಅಭಿಷೇಕ ನಡೆಯಿತು. ದೇವಿಯನ್ನು ದುರ್ಗಾಸ್ವರೂಪಿಯಾಗಿ ಅಲಂಕರಿಸಲಾಯಿತು.
ಬಳಿಕ ಸಹಸ್ರ ನಾಮಾರ್ಚನೆ, ವಿಶೇಷ ಪೂಜೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಪುಣ್ಯಾಹ, ದುರ್ಗಾ ಹೋಮದಂತಹ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದವು.