ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಶನಿವಾರ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಪಾಠ ಮಾಡಿದರು.
ದ್ವಿತೀಯ ಪಿಯು ತರಗತಿಯಲ್ಲಿ ಬೋಧನೆ ಮಾಡಿದರು. ಗಣಿತದಲ್ಲಿನ ‘ಇಂಟಿಗ್ರೆಷನ್’ ಮತ್ತು ‘ಡಿಫರೆನ್ಸಿಯೆಷನ್’ ಕುರಿತು ಪಾಠ ಮಾಡಿದರು.
ಪರಿಕಲ್ಪನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಲೆಕ್ಕಗಳನ್ನು ಬಿಡಿಸಬೇಕು. ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಮಾಡಿದರು.
‘ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ‘ಸ್ಮಾರ್ಟ್ ವರ್ಕ್’ ಯೋಜನೆ ರೂಪಿಸಿಕೊಳ್ಳಬೇಕು. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮೆರೆದು ಶಾಲೆ, ಪೋಷಕರಿಗೆ ಕೀರ್ತಿ ತರಬೇಕು’ ಎಂದು ಕಿವಿಮಾತು ಹೇಳಿದರು.
‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ತರಗತಿಯಲ್ಲಿ ಕಲಿತ ಪಾಠವನ್ನು ಚೆನ್ನಾಗಿ ಮನನ ಮಾಡಬೇಕು. ಪ್ರತಿಯೊಬ್ಬರು ಯಶಸ್ಸು ಸಾಧಿಸಬೇಕು’ ಎಂದು ಸಲಹೆ ನೀಡಿದರು.
‘ಸಾಧನೆ ಮೆರೆಯಲು ಬಹಳಷ್ಟು ಅವಕಾಶಗಳಿವೆ. ಅಂದಿನ ಪಾಠವವನ್ನು ಅಂದೇ ಓದಬೇಕು. ದಿನದ ನಿರ್ದಿಷ್ಟ ಸಮಯವನ್ನು ಓದಿಗಾಗಿ ಮೀಸಲಿಡಬೇಕು. ಸಮಯ ವ್ಯರ್ಥ ಮಾಡಬಾರದು. ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್.ಪೂವಿತಾ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜಪ್ಪ, ಪ್ರಾಂಶುಪಾಲರಾದ ಎಸ್.ಜೆ.ಸಾವಿತ್ರಿ ಇದ್ದರು.