ಮೂಡಿಗೆರೆ: ದೇಶಕ್ಕಾಗಿ ದುಡಿದ ಮಹನೀಯರ ಸಿದ್ಧಾಂತಗಳು ಕೇವಲ ಆಚರಣೆಗಷ್ಟೇ ಸೀಮಿತವಾಗುತ್ತಿರುವುದು ಆತಂಕಕಾರಿ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಮುಂದೆ ದೇಶದಲ್ಲಿ ಆತಂಕಕಾರಿ ಬೆಳೆವಣಿಗೆ ಸೃಷ್ಟಿಯಾಗಲಿದೆ. ಹಿಂದೆ ಮಹಾತ್ಮರ ಜೀವನ ಆದರ್ಶಗಳು ಜನರಿಗೆ ಪ್ರೇರಕ ಶಕ್ತಿಯಾಗಿದ್ದವು. ಆದರೆ, ಇಂದು ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ವಿರುದ್ಧ ಗೇಲಿ ಮಾಡುವವರು ಸಹ ಬೆಳೆಯುತ್ತಿರುವುದು ಸಮಾಜಕ್ಕೆ ಆತಂಕಕಾರಿ. ಈ ದೇಶದ ಒಳಿತಿಗಾಗಿ ತ್ಯಾಗ ಮಾಡಿದ ಎಲ್ಲಾ ಮಹನೀಯರ ಬಗ್ಗೆ ಹಳ್ಳಿಹಳ್ಳಿಗಳಲ್ಲಿ ಜಾಗ್ರತಿ ಮೂಡಿಸುವ ಅವಶ್ಯಕತೆ ಇದೆ’ ಎಂದರು.
ಮುಸ್ಲಿಂ ಧರ್ಮಗುರು ಜೈನುದ್ದೀನ್ ಜಮಾನಿ ಮಾತನಾಡಿ, ‘ಯುವ ಜನತೆ ದೇಶದ ಶಕ್ತಿಯಾಗಿದ್ದು, ಸಮಾಜ ಉಪಯೋಗಿ ಚಟುವಟಿಕೆಗೆ ಬಳಕೆಯಾಗಬೇಕು. ಯುವ ಜನತೆ ಸಮಾಜ ದ್ರೋಹ ಚಟುವಟಿಕೆ ನಡೆಸುವುದನ್ನು ತಡೆಯಲು ಪೋಷಕರು ಎಚ್ಚರ ವಹಿಸಬೇಕಾಗಿದೆ’ ಎಂದರು.
ಪುರೋಹಿತ ಮಹಾಬಲಆಚಾರ್ ಮಾತನಾಡಿ, ‘ಪ್ರತಿಯೊಬ್ಬರು ತಮ್ಮ ಧರ್ಮವನ್ನು ಪ್ರೀತಿಸುವ ಜತೆಗೆ ಅನ್ಯ ಧರ್ಮವನ್ನು ಗೌರವಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ಮಾತ್ರ ಸಮಾಜದಲ್ಲಿ ಸಾಮರಸ್ಯ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತದೆ’ ಎಂದರು.
ಕಸಾಪ ತಾಲ್ಲೂಕು ಸಂಚಾಲಕ ಡಿ.ಕೆ ಲಕ್ಷ್ಮಣ್ಗೌಡ, ತಹಶೀಲ್ದಾರ್ ನಾಗರಾಜು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಡಿ.ಡಿ ಪ್ರಕಾಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಸಿದ್ದರು.