ತರೀಕೆರೆ: ಭಾನುವಾರ ಮಧ್ಯರಾತ್ರಿ ಸುರಿದ ಉತ್ತಮ ಮಳೆಯಿಂದಾಗಿ ತಾಲ್ಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಗಾಳಿಯ ಅಬ್ಬರ ಇಲ್ಲವಾದ್ದರಿಂದ ಅನಾಹುತಗಳು ಸಂಭವಿಸಿಲ್ಲ. ನೀರಿನ ಕೊರತೆಯಿಂದ ಒಣಗತೊಡಗಿದ್ದ ಅಡಿಕೆ ಬೆಳೆಗೆ ಮಳೆಯಿಂದ ಜೀವಜಲ ಸಿಕ್ಕಂತಾಗಿದೆ.
ರೈತರು ಅಡಿಕೆ ತೋಟವನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಒದಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹಲವೆಡೆ ಬೋರ್ವೆಲ್ಗಳಲ್ಲಿ ನೀರು ಬತ್ತಿ ಹೋಗಿದ್ದವು. ಸ್ಥಿತಿವಂತ ರೈತರು ಟ್ಯಾಂಕರ್ ಮೂಲಕ ನೀರು ಪೂರೈಸಿ ತೋಟ ಉಳಿಸಿಕೊಂಡಿದ್ದರೆ, ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಆರ್ಥಿಕ ಸಂಕಷ್ಟದಿಂದ ತಮ್ಮ ತೋಟಗಳಿಗೆ ನೀರು ಒದಗಿಸುವುದನ್ನೇ ಕೈಬಿಟ್ಟದ್ದರು.
ಶನಿವಾರ ಮತ್ತು ಭಾನುವಾರ ಸುರಿದ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದಾರೆ. ಅಡಿಕೆ, ಬಾಳೆ, ತೆಂಗು ಬೆಳೆಗಳು ತುಸು ಉಸಿರಾಡುವಂತಾಗಿದೆ. ಕಸಬಾ ಮತ್ತು ಲಕ್ಕವಳ್ಳಿ ಹೋಬಳಿಯ ಕೆಲವು ಗ್ರಾಮಗಳಿಗೆ ಮಳೆಯಾಗಿಲ್ಲ. ಆ ಭಾಗದ ರೈತರು ಮಳೆಗಾಗಿ ಕಾಯುತ್ತಿದ್ದಾರೆ.
ತರೀಕೆರೆ ಸಮೀಪದ ಬೇಲೇನಹಳ್ಳಿ ಗ್ರಾಮದ ಬಳಿ ನೀರಿಲ್ಲದೆ ಬೆಳೆದು ನಿಂತ ಅಡಿಕೆ ತೋಟ ಒಣಗಿರುವುದು.
ಎಂಟು ನೂರು ಅಡಿ ಕೊರೆದರು ನೀರು ಬರದೆ ಬರೀ ದೂಳು ಬರುತ್ತಿರುವುದು.