ರಾಷ್ಟ್ರಮಟ್ಟದ ನಾಯಕರನ್ನು ರಾಜ್ಯಕ್ಕೆ ಕರೆತಂದು, ಅವರ ಬಾಯಿಂದ ಯದ್ವಾತದ್ವಾ ಕನ್ನಡ ಮಾತಾಡಿಸಿದರೆ ‘ಕನ್ನಡಪ್ರೇಮಿ’ಗಳು ವೋಟ್ ಹಾಕಿಬಿಡುತ್ತಾರೆ ಎಂಬುದು ಅತಿದೊಡ್ಡ ಮೂಢನಂಬಿಕೆ.
ಸ್ವರ, ವ್ಯಂಜನ, ಅಲ್ಪಪ್ರಾಣ, ಮಹಾಪ್ರಾಣ, ಉಚ್ಚಾರದಲ್ಲಷ್ಟೇ ಅಲ್ಲ, ಧ್ವನಿಯ ಏರಿಳಿತದಲ್ಲೂ ವಿಶಿಷ್ಟ ಭಾವನೆಯನ್ನು ವ್ಯಕ್ತಪಡಿಸುವಷ್ಟು ಸೂಕ್ಷ್ಮತೆಯನ್ನು ಹೊಂದಿರುವ ಕನ್ನಡವನ್ನು, ಈ ನಾಯಕರು ಬೇಕಾಬಿಟ್ಟಿಯಾಗಿ ಉಚ್ಚರಿಸಿ ಹಾಸ್ಯದ ವಸ್ತುವನ್ನಾಗಿ ಮಾಡುತ್ತಿರುವುದು ದೊಡ್ಡ ದುರಂತ.
ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಸ್ವಾಗತಾರ್ಹ. ಆದರೆ ಮಹನೀಯರ ಹೆಸರು ಹಾಗೂ ಅವರ ವಚನಗಳನ್ನು ಅನುಚಿತವಾಗಿ ಬಳಕೆ ಮಾಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿದೆ.