ಚಿಕ್ಕಮಗಳೂರು: ‘ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ. ಈ ಪಕ್ಷಗಳವರು ದಲಿತರ ಬಗ್ಗೆ ಮಾತಾಡುತ್ತಾರೆ ಹೊರತು ಅವರ ಅಭಿವೃದ್ಧಿಗೆ ಕೆಲಸ ಮಾಡಲ್ಲ’ ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಸ್.ವೀರಯ್ಯ ಇಲ್ಲಿ ಶನಿವಾರ ಟೀಕಿಸಿದರು.
‘ದಲಿತರವನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಈ ಸಮುದಾಯವನ್ನು ಗುತ್ತಿಗೆ ತೆಗೆದುಕೊಂಡಂತೆ ಕಾಂಗ್ರೆಸ್ ಆಡುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗ ಮೀಸಲಾತಿಗೆ ಪೆಟ್ಟು ಬಿದ್ದಿತ್ತು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಕಾಂಗ್ರೆಸ್ ಮತ್ತು ಜೆಡಿಎಸ್ಗೆ ದಲಿತರ ಮತ ಬೇಕು, ಆದರೆ ಅವರ ಅಭಿವೃದ್ಧಿ ಬಗ್ಗೆ ಗಮನಹರಿಸಿಲ್ಲ. ಈ ಪಕ್ಷಗಳಿಗೆ ದಲಿತರ ಅಭಿವೃದ್ಧಿಗೆ ಶ್ರಮಿಸುವ ಇಚ್ಛಾಶಕ್ತಿ ಇಲ್ಲ’ ಎಂದು ದೂಷಿಸಿದರು.
‘ನರೇಂದ್ರ ಮೋದಿ ಅವರು ದಲಿತರ ಅಭಿವೃದ್ಧಿಗೆ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬಿಜೆಪಿಯು ದಲಿತ ನಾಯಕರನ್ನು ಬೆಳೆಸುತ್ತಿದೆ’ ಎಂದು ಪ್ರತಿಪಾದಿಸಿದರು.
‘ಈ ಬಾರಿ ಚುನಾವಣೆ ಎಂಬ ‘ಪರೀಕ್ಷೆ’ ಈಗ ನಡೆಯಲಿದೆ. ನಿರ್ಲಕ್ಷ್ಯ ತೋರಿದವರಿಗೆ ದಲಿತರು ತಕ್ಕ ಉತ್ತರ ನೀಡಬೇಕು’ ಎಂದರು.