ಶೃಂಗೇರಿ: ನೂರು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ 15 ವರ್ಷಗಳ ಹಿಂದೆ ಮಂಜೂರಾತಿ ಆಗಿದ್ದರೂ, ಆಸ್ಪತ್ರೆ ನಿರ್ಮಾಣಕ್ಕಾಗಿ 2 ವರ್ಷಗಳಿಂದ ನೂರು ಹಾಸಿಗೆ ಆಸ್ಪತ್ರೆ ಹೋರಾಟ ಸಮಿತಿಯು ಶೃಂಗೇರಿ ಬಂದ್ ನಡೆಸಿ, ಬೃಹತ್ ಪ್ರತಿಭಟನೆಯನ್ನು ನಡೆಸಿದರೂ ಸರ್ಕಾರದ ವೈಫಲ್ಯದಿಂದ ಆಸ್ಪತ್ರೆಯಾಗಿಲ್ಲ' ಎಂದು ಸಮಿಯ ರಂಜಿತ್ ದೂರಿದರು.
ನೂರು ಹಾಸಿಗೆ ಆಸ್ಪತ್ರೆ ಹೋರಾಟ ಸಮಿತಿ ಸಂತೆ ಮಾರುಕಟ್ಟೆ ಬಳಿ ಆಯೋಜಿಸಿದ್ದ 2ನೇ ದಿನದ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಮತ್ತು ಸ್ಥಳೀಯ ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಆಸ್ಪತ್ರೆ ಆಗಬೇಕು ಎಂಬ ನಮ್ಮ ಬೇಡಿಕೆ ಸಲ್ಲಿಸಿದರೂ ಈಡೇರಲಿಲ್ಲ. ಇನ್ನಾದರೂ ಎಚ್ಚೇತ್ತು ಊರಿಗೆ ಅವಶ್ಯವಿರುವ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಿ ಎಂದರು.
ಸಮಿತಿಯ ಹೋರಾಟಕ್ಕೆ ಬೆಂಬಲಿಸಿದ ಬೇಸೂರು ರಂಜಿತ್ ಗೌಡ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರು ಮಾತನಾಡಿ, ಶೃಂಗೇರಿ ಕ್ಷೇತ್ರದ ಜನನಾಯಕರೇ ನಿಜವಾದ ಕಾಳಜಿ ಜನರ ಮೇಲಿದ್ದರೆ ನಿಮ್ಮ ರಾಜಕೀಯ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಈ ಹೋರಾಟದಲ್ಲಿ ಭಾಗಿಯಾಗಿ ಎಂದು ಅವರು ಹೇಳಿದರು.
ಸಮಿತಿಯ ಆದರ್ಶ ಮಾತನಾಡಿ, ಭಾನುವಾರ ಕೊಪ್ಪದಲ್ಲಿ ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮದ ಒಳಗಾಗಿ ಬೇಡಿಕೆ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡ ಬೇಕಾಗಿದೆ. ಇಲ್ಲಾವಾದರೆ ಕೊಪ್ಪ ಚಲೋ ಹೋರಾಟ ನಡೆಸುತ್ತೇವೆ ಎಂದರು.
ಸತ್ಯಾಗ್ರಹಕ್ಕೆ ಆಟೊ ಚಾಲಕರ ಮತ್ತು ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರು ಮತ್ತು ಏಜೆಂಟರ ಸಂಘ, ಕರ್ನಾಟಕ ಜನಶಕ್ತಿ ಸಂಘಟನೆ ಹಾಗೂ ನಾಗರಿಕರು ಧರಣಿ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು.
ಪ್ರವೀಣ್, ಮಂಜುನಾಯ್ಕ್, ಅನಿರುದ್ಧ್ ಕೊರಡಕಲ್ಲು, ನಿರಂಜನ್, ಸುನೀಲ್, ಅನಿರುದ್ಧ್ ಹೆಬ್ಬಾರ್, ಅನುಪ್, ಅಂಜನ್, ಚೇತನ್, ಸಂತೋಷ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.