ಕೊಟ್ಟಿಗೆಹಾರ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಹೆಚ್ಚುವರಿ ಕೊಠಡಿ ಇನ್ನೂ ಉದ್ಘಾಟನೆಗೊಂಡಿಲ್ಲ. ಮಳೆಯಾದಾಗ ಚಾವಣಿ ಸೋರುತ್ತಿದ್ದು, ಗೋಡೆಯೂ ತೇವಗೊಂಡಿದೆ.
ವರ್ಷದ ಹಿಂದಷ್ಟೇ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯಿಂದ ಹೆಚ್ಚುವರಿ ಕೊಠಡಿ ನಿರ್ಮಾಣವಾಗಿತ್ತು. ಗೋಡೆಗೆ ಸುಣ್ಣ ಬಳಿಯಲಾಗಿದ್ದು, ನೆಲಕ್ಕೆ ಟೈಲ್ಸ್ ಅಳವಡಿಕೆ, ವಿದ್ಯುತ್ ಸಂಪರ್ಕದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಉದ್ಘಾಟನೆಗೆ ಮುನ್ನವೇ ಈಗ ಮಳೆಗೆ ಚಾವಣಿ ಸೋರಲು ಆರಂಭಿಸಿದೆ.
ಸುಮಾರು ₹15.70ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣಗೊಂಡಿದೆ. ಕಟ್ಟಡ ನಿರ್ಮಾಣ ಮಾಡಲು ಗುತ್ತಿಗೆ ಪಡೆದವರು ಕಟ್ಟಡಕ್ಕೆ ಶೀಟಿನ ಚಾವಣಿ ಮಾಡದಿದ್ದರೆ, ಈ ಮಳೆಗಾಲ ಮುಗಿಯುವ ಮುನ್ನ ತೇವಾಂಶದಿಂದ ಕಟ್ಟಡ ಶಿಥಿಲಗೊಳ್ಳುತ್ತದೆ. ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ವಹಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
‘ಕೊಟ್ಟಿಗೆಹಾರ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚುವರಿ ಕೊಠಡಿಯನ್ನು ಆದ್ಯತೆ ಮೇರೆಗೆ ಕಟ್ಟಲಾಗಿದೆ. ಆದರೆ, ಟೈಲ್ಸ್ ಅಳವಡಿಕೆ ಹಾಗೂ ವಿದ್ಯುತ್ ಸಂಪರ್ಕದ ಕಾರ್ಯ ನಿಂತು ಹೋಗಿದೆ. ಕೋಣೆಯು ಮಳೆಯಿಂದ ಸೋರುವುದರಿಂದ ಮೇಲೆ ಶೀಟು ಹಾಕಿ ಸೋರದಂತೆ ಕ್ರಮವಹಿಸಬೇಕು' ಎಂದು ಎಸ್ಡಿಎಂಸಿ ಅಧ್ಯಕ್ಷೆ ಲತಾ ಆಗ್ರಹಿಸಿದರು.