ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವಿಗೆ ನೋಟಿಸ್‌: ಸ್ಥಳೀಯರಿಂದ ಆಕ್ರೋಶ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ರೈತರಿಂದ ಮನವಿ
Last Updated 3 ಅಕ್ಟೋಬರ್ 2020, 6:36 IST
ಅಕ್ಷರ ಗಾತ್ರ

ಕಳಸ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ರೈತರಿಗೆ ಭೂತೆರವು ನೋಟಿಸ್ ನೀಡಿರುವುದನ್ನು ವಿರೋಧಿಸಿ ವಲಯ ಅರಣ್ಯಾಧಿಕಾರಿ ಕಚೇರಿ ಬಳಿ ಸ್ಥಳೀಯರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ನೆಲ್ಲಿಬೀಡು ಸಂರಕ್ಷಣಾ ವೇದಿಕೆ ಕಾರ್ಯದರ್ಶಿ ಸುರೇಶ್ ಭಟ್ ಮಾತ ನಾಡಿ, ‘ಸಂಸೆ ಗ್ರಾಮದ ಸರ್ವೆ ನಂಬರ್ 138 ಮತ್ತು 120ರಲ್ಲಿ ಹೆಚ್ಚುವರಿ ಭೂಮಿ ಇದೆ. ಅದನ್ನು ಅರಣ್ಯ ಇಲಾಖೆ ಸರ್ವೆ ಮಾಡಿ ಉಳಿಕೆ ಜಾಗ ಸ್ಥಳೀಯರಿಗೆ ಬಿಡಬೇಕು. ಸರ್ವೆ ನಂಬರ್ 183ರಲ್ಲಿ ಕಂದಾಯ ಭೂಮಿ, ಅಕೇಶಿಯಾ ನೆಡು ತೋಪು ಇದೆ. ಆ ಭೂಮಿಯಲ್ಲಿ ಅರ್ಹ ರೈತರಿಗೆ ಫಾರಂ ನಂಬರ್ 50, 53 ಮತ್ತು 57ರ ಅನ್ವಯ ಸಾಗುವಳಿ ಚೀಟಿ ನೀಡಬೇಕು’ ಎಂದು ಆಗ್ರಹಿಸಿದರು.

ಸಂಸೆ ಪಂಚಾಯಿತಿ ಮಾಜಿ ಅಧ್ಯಕ್ಷ ನೆಲ್ಲಿಬೀಡು ಜಗದೀಶ್ ಮಾತನಾಡಿ, ‘ಕುದುರೆಮುಖ ಕಬ್ಬಿಣ ಅದಿರು ಯೋಜ
ನೆಗೆ 40 ವರ್ಷದ ಹಿಂದೆ ಸ್ಥಳಾಂತರ ಆಗಿದ್ದ ಕುಟುಂಬಗಳಿಗೆ ಈಗ ಮತ್ತೆ ತೆರವು ನೋಟಿಸ್ ನೀಡುತ್ತಿರುವುದು ಅಕ್ಷಮ್ಯ. ಅರಣ್ಯ ಇಲಾಖೆ ಮಾನವೀಯವಾಗಿ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಬಲವಾದ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಬಂದ ಕುದುರೆಮುಖ ವನ್ಯ ಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಈ ಸಂದರ್ಭ ದಲ್ಲಿ ಮನವಿ ಸಲ್ಲಿಸಲಾಯಿತು. ‘ಕುದುರೆ ಮುಖದಲ್ಲಿ ಇರುವ ಕಟ್ಟಡಗಳನ್ನು ಬಳಸಿಕೊಂಡು ಶೈಕ್ಷಣಿಕ, ಆರೋಗ್ಯ ಅಥವಾ ಅರಣ್ಯ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ವಿದೇಶಿ ಹಣ ಪಡೆವ ನಕಲಿ ಪರಿಸರವಾದಿಗಳ ಬಗ್ಗೆ ಎಚ್ಚರ ವಹಿಸಬೇಕು. ಅರಣ್ಯ ಕಾಯ್ದೆ ನೆಪದಲ್ಲಿ ಅರಣ್ಯವಾಸಿಗಳಿಗೆ ಕಿರುಕುಳ ನೀಡಬಾರದು. ಭೂ ತೆರವು ನೋಟಿಸ್ ರದ್ದು ಮಾಡಬೇಕು’ ಎಂಬುದು ಪ್ರಮುಖ ಬೇಡಿಕೆಗಳಾಗಿದ್ದವು.

‘10 ಎಕರೆವರೆಗೆ ಒತ್ತುವರಿ ಮಾಡಿ ರುವ ರೈತರ ಭೂಮಿ ತೆರವು ಮಾಡ ಬಾರದು. ಪ್ರವಾಸೋದ್ಯಮವನ್ನು ಎಚ್ಚರಿಕೆಯಿಂದ ನಡೆಸಬೇಕು. 1980ಕ್ಕಿಂತ ಹಿಂದೆ ಅರಣ್ಯ ಭೂಮಿ ಕೃಷಿ ಮಾಡಿದವರಿಗೆ ಮತ್ತು ಪಟ್ಟಾ ಭೂಮಿ ಹೊಂದಿವರಿಗೆ ಕಿರುಕುಳ ನೀಡಬಾರದು. 2005ಕ್ಕಿಂತ ಮುಂಚೆ ಅರಣ್ಯ ಭೂಮಿ ಕೃಷಿ ಮಾಡಿರುವ ಎಲ್ಲರಿಗೂ ಅರಣ್ಯ ಹಕ್ಕು ಕಾಯ್ದೆಯಲ್ಲಿ ಹಕ್ಕು ಪತ್ರ ನೀಡಬೇಕು. ಜಾಂಬಳೆಯಲ್ಲಿ ನಿರ್ಮಿಸಲಾಗಿರುವ ಜಿಯೋ ಮೊಬೈಲ್ ಟವರ್‌ಗೆ ಭೂಗತ ಕೇಬಲ್ ಅಳವಡಿಸಲು ಅನುಮತಿ ನೀಡಬೇಕು’ ಎಂಬ ಬೇಡಿಕೆ ಮನವಿಯಲ್ಲಿವೆ.

ಸ್ಥಳೀಯರಾದ ಜಯಂತ್‍ ಗೌಡ, ಸುರೇಶ್, ಮನೋಜ್, ನಾಗೇಶ್‍ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT