ಚಿಕ್ಕಮಗಳೂರು: ಅಖಿಲ ಕರ್ನಾಟಕ ಕುಳುವ ಮಹಾಸಂಘದ ವತಿಯಿಂದ ಇದೇ 14ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ನಂದಿಹೊಸಳ್ಳಿಯಲ್ಲಿ ‘ಕಾಯಕಯೋಗಿ ನುಲಿಯ ಚಂದಯ್ಯ ಅವರ 842ನೇ ಸ್ಮರಣೋತ್ಸವ ಮತ್ತು ದಾಸೋಹ ಜಾತ್ರಾ ಮಹೋತ್ಸವ’ ಆಯೋಜಿಸಲಾಗಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಗಾಳಪ್ಪ ಇಲ್ಲಿ ಶನಿವಾರ ತಿಳಿಸಿದರು.
ಬೆಳಿಗ್ಗೆ ನಂದಿಹೊಸಳ್ಳಿ ಗೇಟ್ ಬಳಿಯಿಂದ ಹೊಸಳ್ಳಿ ವರೆಗೆ ದುರ್ಗಮ್ಮ ಉತ್ಸವಮೂರ್ತಿ, ಪೂರ್ಣಕುಂಭ ಕಳಸ ಮೆರವಣಿಗೆ ನಡೆಸಲಾಗುವುದು. ನಂತರ ಪೂಜಾ ಕೈಂಕರ್ಯ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಕಾಯಕಯೋಗಿ ನುಲಿಯಚಂದಯ್ಯ ಅವರು ಬಸವಣ್ಣನವರ ಸಮಕಾಲೀನರು. ಬಸವಣ್ಣ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. ಬಸವಣ್ಣನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಅವರು ತರೀಕೆರೆಯ ನಂದಿಗ್ರಾಮದಲ್ಲಿ ಬಹುಕಾಲ ನೆಲೆನಿಂತಿದ್ದರು ಎನ್ನುವ ಇತಿಹಾಸ ಇದೆ ಎಂದು ಅವರು ಹೇಳಿದರು.
ಕೊರಮ, ಕೊರಚ, ಕೊರವ, ಕುಳುವ ಸಾಮುದಾಯಗಳನ್ನು ಅಲೆಮಾರಿ ಪಟ್ಟಿಗೆ ಸರ್ಕಾರ ಸೇರಿಸಿದೆ. ಆದರೆ ಸೌಲಭ್ಯಗಳು ಮಾತ್ರ ಸಮಪರ್ಕವಾಗಿ ದೊರೆಯುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗಮನಹರಿಸಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಮಂಜುನಾಥ, ಪ್ರಧಾನಕಾರ್ಯದರ್ಶಿ ಶ್ರೀನಿವಾಸ, ಸದಸ್ಯರಾದ ಟಿ.ಮೂರ್ತಿ, ಗುಂಡಪ್ಪ ಇದ್ದರು.