ತರೀಕೆರೆ: ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಪಿಳ್ಳೆ ಬೀರನಹಳ್ಳಿ ಅರಣ್ಯ ಪ್ರದೇಶದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನದ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ.
ಇನೋವಾ ಕಾರಿನಲ್ಲಿ ಗೋವುಗಳನ್ನು ಕದ್ದು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದ ಪೊಲೀಸರು, ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಪಿಳ್ಳೆ ಬೀರನಹಳ್ಳಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಸುಕಿನ ಜಾವ 3 ಗಂಟೆಗೆ ಕಾರನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ.
ಈ ವೇಳೆ ಪೊಲೀಸರು ಗೋಕಳ್ಳರ ವಾಹನವನ್ನು ಬೆನ್ನಟ್ಟಿ ಕೊಂಡು ಹೋಗುವಾಗ ಆರೋಪಿ ಗಳು ಪೊಲೀಸ್ ವಾಹನದತ್ತ ನುಗ್ಗಿಸಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಬ್ ಇನ್ಸ್ಪೆಕ್ಟರ್ ರಫೀಕ್ ಐದು ಸುತ್ತು ಗುಂಡು ಹಾರಿಸಿದ್ದಾರೆ. ಬೆದರಿದ ಆರೋಪಿಗಳು ವಾಹನವನ್ನು ಅಲ್ಲೇ ಬಿಟ್ಟು ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಕಾನ್ಸ್ಟೆಬಲ್ಗಳಾದ ಆನಂದ ಮತ್ತು ಹೀರಗೊಂಡ ಮೆಣಚಿ ಅವರು ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ವಾಹನದಲ್ಲಿ ಹಸು ಪತ್ತೆ ಯಾಗಿದೆ. ಬೆಂಗಳೂರಿನ ನೋಂದಣಿ ಹೊಂದಿರುವ ವಾಹನದಲ್ಲಿ ಮಂಗ ಳೂರು ಮೂಲದ ಆರೋಪಿಗಳು ಇದ್ದರು ಎಂದು ಶಂಕಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಆನಂದ, ಪರಮೇಶ, ಹನುಮ ನಾಯಕ, ರುದ್ರೇಶ , ಅಮಿತ್, ಮಂಜುನಾಥ್ ಭಾಗವಹಿಸಿದ್ದರು.