ಅಜ್ಜಂಪುರ: ‘ಗಡಿ ಗ್ರಾಮಗಳ ಅಭಿವೃದ್ಧಿಗೆ ಕಂಕಣಬದ್ಧ ವಾಗಿದ್ದೇನೆ. ಕ್ಷೇತ್ರದ ಎಲ್ಲ ಹಳ್ಳಿಗಳು, ಹೋಬಳಿ ಮತ್ತು ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸುವ ರಸ್ತೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ’ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ತಾಲ್ಲೂಕಿನ ಗಡಿಗಿರಿಯಾಪುರ ಗ್ರಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ಗಡಿಗಿರಿಯಾಪುರ-ದಾಸರಹಟ್ಟಿ 3.8 ಕಿ.ಮೀ. ಉದ್ದದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿ ಸಿದ ಬಳಿಕ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಕೈಬಿಟ್ಟಿರುವ ಶಿವನಿ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಸಿದ್ರಾಮೇಶ್ವರ ಸಮುದಾಯ ಭವನಕ್ಕೆ ₹15 ಲಕ್ಷ ಅನುದಾನ ನೀಡಲಾಗಿದೆ ಎಂದರು.
ವಕೀಲ ಲಿಂಗರಾಜು, ಭದ್ರಾ ಮೇಲ್ದಂಡೆ ಯೋಜನೆಯಡಿ ಶಿವನಿ, ತ್ಯಾಗದಕಟ್ಟೆ, ಕಲ್ಲೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಕೈಗೊಳ್ಳಬೇಕು. ಕೃಷಿ ಜಮೀನಿಗೆ ಹನಿ ನೀರಾವರಿ ಕಲ್ಪಿಸಬೇಕು. ವಿದ್ಯುತ್ ವ್ಯತ್ಯಯ ತಪ್ಪಿಸಲು ಸ್ಥಳೀಯವಾಗಿ ಎಎಸ್ಎಸ್ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಎನ್.ರಾಜು, ಶಿವನಿ ಆರ್ಎಸ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿದ್ರಾಮೇಶ್ವರ ಸಮುದಾಯ ಭವನ ಪೂರ್ಣಗೊಳಿಸಲು ಸಹಕಾರ ನೀಡಬೇಕು ಮತ್ತು ಗ್ರಾಮದಲ್ಲಿ ಬಾಕಿ ಉಳಿದಿರುವ ರಸ್ತೆ ಅಭಿವೃದ್ದಿಗೆ ಹೆಚ್ಚುವರಿಯಾಗಿ ₹ 20 ಲಕ್ಷ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಮುಖಂಡ ಶಂಬೈನೂರು ಆನಂದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಮುಖಂಡ ಈಶ್ವರಪ್ಪ, ದಂದೂರು ತಮಯಣ್ಣ, ಪಿಡಿಒ ಸುರೇಶ್, ನಾಟಕ ಅಕಾಡಮಿ ಸದಸ್ಯ ಈಶ್ವರಪ್ಪ, ಗುತ್ತಿಗೆದಾರ ಎ.ಟಿ.ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.