ಕೊಪ್ಪ: ತಾಲ್ಲೂಕಿನ ಕೆಲವೆಡೆ ಭಾನು ವಾರ ಸಂಜೆ ತುಂತುರು ಮಳೆಯಾಗಿದೆ. ತಾಲ್ಲೂಕಿನ ನಾರ್ವೆ ಭಾಗ, ಗಡಿಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಶೃಂಗೇರಿ ತಾಲ್ಲೂಕಿನಲ್ಲೂ ತುಂತುರು ಮಳೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಕಳಸ ಸುತ್ತಮುತ್ತ ಸಾಧಾರಣ ಮಳೆಯಾಗಿದೆ.
ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ ಭಾನುವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಮತ್ತು ಭತ್ತ ಬೆಳೆಗಾರರಿಗೆ ತೊಂದರೆಯಾಗಿದೆ.
ಬಾಳೆಹೊನ್ನೂರು: ಭಾನುವಾರ ಸಂಜೆ ವೇಳೆಗೆ ಸಿಗೋಡು, ಹೇರೂರು, ಬಿಕ್ಕರಣೆ, ಜಯಪುರ ಸೇರಿದಂತೆ ವಿವಿಧಡೆ ದಿಢೀರನೆ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಆಸ್ತವ್ಯಸ್ತಗೊಂಡಿತು.
ಕಾಫಿ, ಅಡಿಕೆ, ಭತ್ತದ ಕೊಯ್ಲು ಎಲ್ಲಡೆ ನಡೆಯುತ್ತಿದ್ದು ಮಳೆಯಿಂದಾಗಿ ರೈತರು ಕಂಗಾಲಾದರು. ಮಳೆಯ ಹೊಡೆತದಿಂದ ಕಟಾವು ಮಾಡಿದ ಬೆಳೆಯನ್ನು ರಕ್ಷಿಸಲು ಟಾರ್ಪಲ್ ಹೊದೆಸುತ್ತಿದ್ದ ದೃಶ್ಯ ಕಂಡುಬಂತು.
ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನದ ನಂತರ ಮೋಡಕವಿದ ವಾತಾವರಣ ಇತ್ತು.
ಕಳೆದೆರೆಡು ದಿನಗಳಿಂದ ಬಿಸಿಲು, ಮೋಡ ಕವಿದ ವಾತಾವರಣವಿತ್ತು. ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ.