ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಜುಲೈ 1ರಿಂದ 11ರವರೆಗೆ ಒಟ್ಟು 163 ಮನೆಗಳು ಹಾನಿಯಾಗಿವೆ.
29 ಮನೆಗಳು ಪೂರ್ಣ ನೆಲಸಮವಾಗಿವೆ. 51 ಮನೆಗಳು ಅರ್ಧದಷ್ಟು ಹಾನಿ ಹಾಗೂ 83 ಮನೆಗಳು ಭಾಗಶಃ ಹಾನಿಯಾಗಿವೆ. ಐದು ಗುಡಿಸಲು ಕುಸಿದಿವೆ. ಎರಡು ಜಾನುವಾರುಗಳು ಮೃತಪಟ್ಟಿವೆ. ಒಂದು ಜೀವ ಹಾನಿ ಸಂಭವಿಸಿದೆ.
19.4 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಷ್ಟವಾಗಿದೆ. 143 ವಿದ್ಯುತ್ ಕಂಬಗಳು ಮುರಿದಿವೆ. ಒಂಬತ್ತು ಸೇತುವೆಗಳು, 143. 5 ಕಿ.ಮೀ ರಸ್ತೆ, 2.9 ಕಿ.ಮೀ ವಿದ್ಯುತ್ ಮಾರ್ಗ ಹಾಳಾಗಿದೆ ಎಂದು ಅಂದಾಜಿಸಲಾಗಿದೆ.
ನಗರದ ಉಪ್ಪಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಬುಧವಾರ ನೀರು ನುಗ್ಗಿತ್ತು. ಶಾಲೆ ಪಕ್ಕದ ಜಮೀನು ಕಡೆಯಿಂದ ನೀರು ನುಗ್ಗಿ ಅವಾಂತರವಾಗಿತ್ತು. ಶಿಕ್ಷಕರು ಕೊಠಡಿಗಳಿಂದ ನೀರು ಹೊರ ಚೆಲ್ಲಿದರು.
ಮುಂದುವರಿದ ಶೋಧ ಕಾರ್ಯಾಚರಣೆ: ತೊಗರಿಹಂಕಲ್ ಸಮೀಪದ ಎಸ್ಟೇಟ್ನ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಒಂದನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ ಹಾಗೂ ನಗರದ ಉಂಡೇದಾಸರಹಳ್ಳಿಯ ಯಗಚಿ ಹಳ್ಳದಲ್ಲಿ ಕಣ್ಮರೆಯಾಗಿರುವ ಚಿಂದಿ ಹಾಯು ವ್ಯಕ್ತಿ ಹುಡುಕಾಟ ಮುಂದುವರಿದಿದೆ.
‘ಎರಡೂ ಕಡೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈವರೆಗೆ ಬಾಲಕಿ, ವ್ಯಕ್ತಿ ಪತ್ತೆಯಾಗಿಲ್ಲ’ ಎಂದು ಆಗ್ನಿಶಾಮಕ ಅಧಿಕಾರಿ ಕೆ.ಪಿ.ಶಶಿಧರ್ ‘ಪ್ರಜಾವಾಣಿ’ಗೆ ತಿಳಿಸಿದರು.