ಬೆಂಗಳೂರು: ರಾಜ್ಯದಲ್ಲಿ ಶನಿವಾರ ಚಿಕ್ಕಮಗಳೂರು, ವಿಜಯಪುರ, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ.
ದಾಂಡೇಲಿಯ ಅಂಬೇವಾಡಿಯಿಂದ ಕಿರವತ್ತಿ ಗ್ರೀಡ್ಗೆ ವಿದ್ಯುತ್ ಸರಬರಾಜು ಮಾಡುವ ಮಾರ್ಗದಲ್ಲಿ ಸಮಸ್ಯೆ ಕಂಡುಬಂದಿರುವುದರಿಂದ, ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಲೆನಾಡು ಮತ್ತು ಬಯಲುಸೀಮೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಅಜ್ಜಂಪುರ ಬಳಿ ಬಗ್ಗವಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಚಾವಣಿಗೆ ಹಾಕಿದ್ದ ತಗಡಿನ ಶೀಟ್ಗಳು ಗಾಳಿ-ಮಳೆಗೆ ಹಾರಿವೆ.
ಧಾರವಾಡ, ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಆಲಿಕಲ್ಲು ಮಳೆಯಾಗಿದೆ. ಹಾವೇರಿ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಮಳೆಯಾಗಿದೆ. ತಾಳಿಕೋಟೆಯಲ್ಲಿಬಿರುಗಾಳಿಗೆ ಬೇವಿನ ಮರ ಬಿದ್ದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ವಿವಿಧೆಡೆ ಬಿರುಸಿನ ಮಳೆ ಸುರಿಯಿತು. ದುಗ್ಗಾವರದ ಕೆರೆ ಭರ್ತಿಯಾಗಿದ್ದು, ದೇವಪುರದ ಕೆರೆ ಕಡೆಗೆ ನೀರು ಹರಿಯುತ್ತಿದೆ.
ಭರಮಸಾಗರದಲ್ಲಿ ಆಲಿಕಲ್ಲು ಮಳೆ ಸುರಿದಿದೆ.ದಾವಣಗೆರೆ ಜಿಲ್ಲೆಯ ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು. ನ್ಯಾಮತಿ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದೆ.