ಮೂಡಿಗೆರೆ: ತಾಲ್ಲೂಕಿನಾದ್ಯಂತ ಶನಿವಾರ ಮಳೆ ಚುರುಕುಗೊಂಡಿದ್ದು ವಿವಿಧೆಡೆ ಧಾರಾಕಾರ ಮಳೆ ಸುರಿಯಿತು.
ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಉಂಟಾಗಿ, ಬಿಟ್ಟು ಬಿಟ್ಟು ಜಿನುಗು ಮಳೆಯಾಗುತ್ತಿತ್ತು. ಸಂಜೆ ಪಟ್ಟಣ ಸೇರಿದಂತೆ ದೇವರುಂದ, ಜನ್ನಾಪುರ, ಬೆಟ್ಟದಮನೆ, ಹ್ಯಾಂಡ್ ಪೋಸ್ಟ್, ಕೊಲ್ಲಿಬೈಲ್, ಬಿದರಹಳ್ಳಿ, ಹೊರಟ್ಟಿ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಿತು.
ಮುಂಗಾರು ಪ್ರವೇಶಕ್ಕೆ ಸಿದ್ಧರಾಗಿ ರುವ ರೈತ ಪಾಳಯವು, ಭತ್ತದ ಗದ್ದೆಗಳನ್ನು ಸಸಿಮಡಿ ನಿರ್ಮಿಸಲು ಸಿದ್ಧ ಮಾಡಿಟ್ಟುಕೊಂಡಿದ್ದು, ಮಳೆಯು, ಅಗಡಿಗಳಿಗೆ ಭತ್ತ ಚೆಲ್ಲಲು ಹದ ತಂದುಕೊಟ್ಟಿತು.
ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆ ಹಾರ, ಚಾರ್ಮಾಡಿ ಘಾಟಿ, ಬಾಳೂರು, ನಿಡುವಾಳೆ, ಕೆಳಗೂರು ಸೇರಿದಂತೆ ಹಲವಡೆ ಶನಿವಾರ ಮಧ್ಯಾಹ್ನದಿಂದ ಉತ್ತಮ ಮಳೆಯಾಗಿದೆ.
ಮುಂಗಾರು ಮಳೆ ಚುರುಕಾಗಿ ರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮಳೆಯಾಗಿರುವುದರಿಂದ ಕಾಫಿ ತೋಟದಲ್ಲಿ ಗಿಡಗಳಿಗೆ ಗೊಬ್ಬರ ಹಾಕುವ ಕಾರ್ಯ ಭರದಿಂದ ಸಾಗಿದೆ. ಮುಂಗಾರು ಸಕಾಲಕ್ಕೆ ಬಂದಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಳೆಯಿಂದ ಚಳಿ ವಾತಾವರಣ ನಿರ್ಮಾಣವಾಗಿದೆ. ಗದ್ದೆಗಳಲ್ಲಿ ನೀರು ತುಂಬಿಕೊಂಡು ಜಲಾವೃತವಾದಂತೆ ಕಾಣುತ್ತಿದೆ.
ಎನ್.ಆರ್.ಪುರ ಮತ್ತು ತರೀಕೆರೆ ಯಲ್ಲಿ ಸಾಧಾರಣ ಮಳೆಯಾಗಿದೆ.