ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕಲ್ಕುಳಿ ವಿಠಲ ಆಯ್ಕೆಗೆ ಸಂಬಂಧಿಸಿದಂತೆ ಪರ–ವಿರೋಧಗಳ ಜಟಾಪಟಿ ಮುಂದುವರಿದಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ಕೆಲ ಸಂದೇಶಗಳು ಇಂತಿವೆ.
‘ಮಲೆನಾಡಿನಲ್ಲಿ ತುಂಗಾ, ಭದ್ರಾ ನದಿಗಳ ಮೂಲ ಉಳಿದಿದೆ ಎಂದರೆ ಕಲ್ಕುಳಿ ವಿಠಲ ಹೆಗ್ಡೆ ಅವರ ಹೋರಾಟ ಇದೆ. ಹಾಗಾಗಿ, ಅವರ ಅಧ್ಯಕ್ಷತೆಯಲ್ಲಿ ‘ಕನ್ನಡ ತೇರು ಎಳೆಯೋಣ’ ಬನ್ನಿ ಎಂದು ಕನ್ನಡ ಅಭಿಮಾನಿಗಳ ಬಳಗ ಕರ್ನಾಟಕ ಹೆಸರಿನಲ್ಲಿ ಮನವಿ ಮಾಡಿದೆ.
‘ಪ್ರೀತಿಯಿಂದ ಸಮ್ಮೇಳನ ಮಾಡೋಣ ಬನ್ನಿ. ನೀವೂ ಬನ್ನಿ... ನಿಮ್ಮವರನ್ನು ಕರೆತನ್ನಿ ಎಂಬ ಸಂದೇಶವೂ ಇದೆ.
‘ಸಮ್ಮೇಳನ ಬೇಕು, ಅಧ್ಯಕ್ಷ ಬೇಡ. ಜ.10ರಂದು ಶೃಂಗೇರಿ ಚಲೋ’ ಎಂಬ ಸಂದೇಶವು ನಕ್ಸಲ್ ವಿರೋಧಿ ಹೋರಾಟ ಸಮಿತಿ ಹೆಸರಿನಲ್ಲಿ ಹರಿದಾಡುತ್ತಿದೆ.
‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿರೋಧಿಸಿ ಜ.10ರಂದು ಶೃಂಗೇರಿ ಬಂದ್ ಎಂಬ ಸಂದೇಶವೂ ಹರಿದಾಡುತ್ತಿದೆ.
ಸಮ್ಮೇಳನ ವಿರೋಧಿಸುವಂತೆ ಕೆಲವರು ಶೃಂಗೇರಿಯಲ್ಲಿ ಕರಪತ್ರಗಳನ್ನು ಹಂಚಿದ್ದಾರೆ ಎಂದು ಶೃಂಗೇರಿಯ ನಾಗರಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.