ಚಿಕ್ಕಮಗಳೂರು: ಬೇಸಿಗೆ ರಜೆ ಬಳಿಕ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಆರಂಭವಾಗಿದ್ದು ಶುಕ್ರವಾರ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಮರಳಿದರು.
ನಗರದ ಆಜಾದ್ ಪಾರ್ಕ್ನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ, ತಮಿಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧೆಡೆ ಶಾಲೆಗಳಿಗೆ ಸುಣ್ಣ–ಬಣ್ಣ ಬಳಿದು ಮಾವಿನ ತಳಿರು ತೋರಣ ಕಟ್ಟಿ ಸಿಂಗಾರಗೊಳಿಸಲಾಗಿತ್ತು. ಶಾಲೆಗೆ ಬಂದ ಮಕ್ಕಳನ್ನು ಗುಲಾಬಿಯೊಂದಿಗೆ ಸಿಹಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಪ್ರವಾಸ, ಸಂಬಂಧಿಕರ ಮನೆಗಳಲ್ಲಿ ಇದ್ದು ಬೇಸಿಗೆ ರಜೆ ದಿನಗಳನ್ನು ಕಳೆದಿದ್ದ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಶಾಲಾ ತರಗತಿಗಳಿಗೆ ಹಾಜರಾಗಿ ಸಂಭ್ರಮಪಟ್ಟರು. ಆರಂಭದ ದಿನವಾದ್ದರಿಂದ ಕೆಲ ಶಾಲೆಗಳಲ್ಲಿ ಮಕ್ಕಳ ಕಲರವ ಇತ್ತು. ಕೆಲವೆಡೆ ಸಂಖ್ಯೆ ಕಡಿಮೆ ಇತ್ತು.
ಶಾಲೆಗೆ ಮರಳಿದ ಮಕ್ಕಳನ್ನು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಗುಲಾಬಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಶಾಲೆಯಲ್ಲಿ ತೇರ್ಗಡೆಯಾದವರು ಸೇರಿ ಒಟ್ಟು 120 ವಿದ್ಯಾರ್ಥಿಗಳಿದ್ದು ಮಧ್ಯಾಹ್ನ ಸಿಹಿ ಊಟ ನೀಡಲಾಯಿತು ಎಂದು ಬೇಲೂರು ರಸ್ತೆಯ ಕರ್ನಾಟಕ ಪ್ಲಬಿಕ್ ಶಾಲೆಯ ಮುಖ್ಯಶಿಕ್ಷಕಿ ಸಿ.ಎಸ್.ಪ್ರೇಮಾ ಹೇಳಿದರು.
ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 30 ಮಕ್ಕಳಿದ್ದಾರೆ. ಶಾಂತಿನಗರ, ಅಂಬೇಡ್ಕರ್ ರಸ್ತೆ ಬಡಾವಣೆಗಳಿಂದ ಹೆಚ್ಚಾಗಿ ಬರುತ್ತಾರೆ. ಮಕ್ಕಳನ್ನು ಕರೆತರಲು ಶಾಲೆ ವತಿಯಿಂದಲೇ ಆಟೊ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಜಾದ್ ಪಾರ್ಕ್ ವೃತ್ತದ ತಮಿಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪಿ.ಎಸ್.ವಾಣಿ ತಿಳಿಸಿದರು.
ಜಿಲ್ಲೆಯ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ಸಮವಸ್ತ್ರ ವಿತರಿಸಲಾಗಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗೆ ಹಾಜರಾಗಿದ್ದಾರೆ.ಮಂಜುನಾಥ್ ಡಿಡಿಪಿಐ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿದ್ದು ಬಹುತೇಕ ಶಾಲೆಗಳಲ್ಲಿ ಮೊದಲ ದಿನವೇ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.ರವೀಶ್– ಚಿಕ್ಕಮಗಳೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.