ಆಲ್ದೂರು: ಪಟ್ಟಣದ ಸಂತೆ ಮೈದಾನ ವಾರ್ಡ್ನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ್ದ ಸಮುದಾಯ ಶೌಚಾಲಯದ ಕಾಮಗಾರಿ ಕಳಪೆಯಾಗಿದೆಯೆಂದು ಕೆಲವು ಸದಸ್ಯರು ಆರೋಪಿದ ಕಾರಣ, ಉದ್ಘಾಟನಾ ಕಾರ್ಯಕ್ರಮ ರದ್ದುಗೊಂಡಿತು.
ಸಂತೆಗೆ ಬರುವ ವ್ಯಾಪಾರಿಗಳು, ಗ್ರಾಹಕರ ಅನುಕೂಲಕ್ಕೆ ಪಂಚಾಯಿತಿಯು ಸಮುದಾಯ ಶೌಚಾಲಯವನ್ನು ನಿರ್ಮಿಸಿತ್ತು. ಬುಧವಾರ ಇದರ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು. ಸದಸ್ಯರಾದ ಮಮತಾ ಗುರುಮೂರ್ತಿ, ಸರೋಜಮ್ಮ ಮಂಜುನಾಥ್ ಮತ್ತಿತರರು ಕಳಪೆ ಕಾಮಗಾರಿಯ ಕಾರಣ ನೀಡಿ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದರು.
ಈ ಹಿಂದೆಯೂ ಪಂಚಾಯಿತಿ ಸಭೆಯಲ್ಲಿ ಮಮತಾ ಗುರುಮೂರ್ತಿ, ನಿತಿನ್ ಅವರು ಶೌಚಾಲಯದ ಕಾಮಗಾರಿ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ₹4.90 ಲಕ್ಷ ವೆಚ್ಚ ಮಾಡಿದ್ದರೂ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಆರೋಪಿಸಿದ್ದರು.
‘ದೂರದಿಂದ ಬರುವ ಜನರಿಗೆ ಅನುಕೂಲವಾಗಲೆಂದು ಶೌಚಾಲಯ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದೆವು. ಆದರೆ, ಕಟ್ಟಡದ ಚಾವಣಿ, ಶೌಚ ಶೇಖರಣಾ ಗುಂಡಿ ಎಲ್ಲವೂ ಕಳಪೆಯಾಗಿದೆ. ವಾರ್ಡ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಸರಿಪಡಿಸಲು ತಿಳಿಸಿದ್ದರೂ, ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರಾದ ಜೀವನ್ ಕೆ. ದೂರಿದರು.
‘ಸಮಸ್ಯೆ ಸರಿಪಡಿಸದಿದ್ದರೆ ಸಂಬಂಧಪಟ್ಟ ಇಲಾಖೆ, ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು’ ಎಂದು ಸ್ಥಳೀಯರಾದ ಶಿವಾನಂದ, ಅಣ್ಣಪ್ಪ, ಮನೋಜ್, ಅವಿನಾಶ್ ಆಚಾರ್ಯ ಹೇಳಿದ್ದಾರೆ.
ಕಾಮಗಾರಿ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದ್ದು, ಗುಣಮಟ್ಟ ಪರಿಶೀಲಿಸಿ, ಸರಿಪಡಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಶೂನ್ ನಹರ್ ತಿಳಿಸಿದರು.
ಕಾಮಗಾರಿಯಲ್ಲಿ ನ್ಯೂನ್ಯತೆ ಇದ್ದರೆ ಗುತ್ತಿಗೆದಾರರಿಗೆ ತಿಳಿಸಿ, ಒಂದು ವಾರದಲ್ಲಿ ದುರಸ್ತಿ ಮಾಡಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಿರಿಯ ಸಹಾಯಕ ಎಂಜಿನಿಯರ್ ಸಂತೋಷ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.