ಕೊಟ್ಟಿಗೆಹಾರ: ಅಕಾಲಿಕ ಮಳೆಯು ಕಾಫಿ ಬೆಳೆಗಾರರನ್ನು ನಷ್ಟದ ಹಾದಿಗೆ ತಳ್ಳುವಂತೆ ಮಾಡಿದೆ. ಮೂಡಿಗೆರೆ ತಾಲ್ಲೂಕಿನಾದ್ಯಂತ ಅರೇಬಿಕಾ ಕಾಫಿ ಕೊಯ್ಲು ಆರಂಭವಾಗಿದ್ದು, ಕಣದಲ್ಲಿ ಒಣಗಲು ಹಾಕಿದ ಕಾಫಿ ನೀರಿನಿಂದ ತೊಯ್ದು ಕೊಳೆಯುವಂತಾಗಿದೆ.
ರೊಬಸ್ಟ ಕಾಫಿಯೂ ಹಣ್ಣಾಗಿದ್ದು, ರೈತರು ಕೊಯ್ಲು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ ಮಳೆ ಸುರಿಯುತ್ತಿರುವುದರಿಂದ ಬೆಳೆ ಗಿಡದಿಂದ ಉದುರುವಂತಾಗಿದೆ. ಕಾಫಿ ಬೆಳೆಗೆ ಮಂಗಗಳ ಕಾಟವೂ ಅತಿಯಾಗಿದ್ದು, ಕಾಫಿ ಹಣ್ಣು ತಿಂದು ಹಾಳು ಮಾಡುತ್ತಿವೆ.
ಅಡಿಕೆ ಬೆಳೆಗೂ ಎಲೆ ಚುಕ್ಕಿ ರೋಗ, ಕೊಳೆರೋಗ ಬಾಧಿಸಿದ್ದು, ಅಡಿಕೆ ಮರಗಳು ಸಾಯುತ್ತಿವೆ. ಮಲೆನಾಡಿನಲ್ಲಿ ಶೇ 80ರಷ್ಟು ಗದ್ದೆಗಳು ಅಡಿಕೆ, ಕಾಫಿ ತೋಟಗಳಾಗಿ ಬದಲಾಗಿವೆ. ಕೃಷಿಯನ್ನು ಅವಲಂಬಿಸಿದ ರೈತರು ಹವಾಮಾನ ವೈಪರೀತ್ಯದಿಂದ ನಷ್ಟ ಅನುಭವಿಸುತ್ತಿದ್ದಾರೆ.
ಭತ್ತದ ಬೆಳೆಯೂ ನೆಲಕಚ್ಚುವಂತಾಗಿದೆ. ಭತ್ತದ ಕಟಾವು ಡಿಸೆಂಬರ್, ಜನವರಿಯಲ್ಲಿ ಮುಗಿಯಬೇಕಿತ್ತು. ಆದರೆ, ಮಳೆಯಿಂದ ಕೊಯ್ಲು ವಿಳಂಬವಾಗಿ ನಷ್ಟ ಅನುಭವಿಸುವಂತಾಗಿದೆ. ಸಾಲ ಮಾಡಿ ಬೆಳೆ ಬೆಳೆದ ರೈತರು ಈ ಬಾರಿ ಬ್ಯಾಂಕ್ ಸಾಲ ಮರುಪಾವತಿಸಲು ಪರರದಾಡುವಂತಾಗಿದೆ.
ಕಾಫಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ, ಕೇಂದ್ರ ಸರ್ಕಾರ ಹಾಗೂ ಕಾಫಿ ಮಂಡಳಿ ಮಧ್ಯ ಪ್ರವೇಶಿಸಿ ನೆರವಿಗೆ ಬರಬೇಕು. ನಷ್ಟ ಅನುಭವಿಸಿದ ರೈತರಿಗೆ ನೆರವು ನೀಡಬೇಕು ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಒತ್ತಾಯಿಸಿದ್ದಾರೆ.
ಕೊಟ್ಟಿಗೆಹಾರದ ಅತ್ತಿಗೆರೆ ಗ್ರಾಮದ ತೋಟವೊಂದರಲ್ಲಿ ಅಡಿಕೆ ಬೆಳೆ ಕೊಳೆರೋಗದಿಂದ ನೆಲಕ್ಕೆ ಬಿದ್ದಿದೆ
ಅಕಾಲಿಕ ಮಳೆಗೆ ಕಾಫಿ ಬೆಳೆ ಗಿಡದಲ್ಲಿ ಒಣಗಿ ಕೊಳೆಯುತ್ತಿದೆ
ಅತ್ತಿಗೆರೆಯ ಅಡಿಕೆ ತೋಟದಲ್ಲಿ ಕೊಳೆರೋಗದಿಂದ ನೆಲಕ್ಕೆ ಬಿದ್ದಿರುವ ಅಡಿಕೆ