ಶೃಂಗೇರಿ : ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ನೂತನ ಜಿಲ್ಲಾ ಪಂಚಾಯಿತಿ ಸದಸ್ಯ ರಂಗನಾಥ್ ತಿಳಿಸಿದರು. ವಿದ್ಯಾರಣ್ಯಪುರ ಶ್ರೀ ರಾಮ ಸೇವಾ ಸಮಿತಿಯವರು ಹಾಗೂ ಗ್ರಾಮಸ್ಥರು ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ.
ವಿಧಾನಸಭಾ ಕ್ಷೇತ್ರವು 3 ತಾಲ್ಲೂಕುಗಳನ್ನು ಹಾಗೂ ಖಾಂಡ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರ ಒಳಗೊಂಡಿದ್ದು ಮಲೆನಾಡಿನ ಪ್ರತಿಯೊಂದು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆಗಬೇಕಾಗಿದೆ. ಶಾಸಕರ ಮತ್ತು ಸಂಸದರ ನೆರವು ಪಡೆದು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಲಾಗುವುದು. ಈ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜನ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಆಡಳಿತಾವಧಿಯಲ್ಲಿ ಜನರ ವಿಶ್ವಾಸಕ್ಕೆ ಸ್ಪಂದಿಸುವೆ.
ಹಾಗೆಯೇ ಅಭಿವೃದ್ಧಿಯ ವಿಚಾರ ಬಂದಾಗ ಕ್ಷೇತ್ರ ಮೊದಲು. ಈ ವಿಷಯದಲ್ಲಿ ಪಕ್ಷ ಬೇಧ ಮರೆತು ಕೆಲಸ ಮಾಡುತ್ತೇನೆಯೇ ಹೊರತು ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿಗೆ ಆಯ್ಕೆಯಾದ ಸುಂದರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತೀ ವೆಂಕಟೇಶ್ ಉಪಾಧ್ಯಕ್ಷ ಬಿ.ಕೆ. ಶ್ರೀನಿವಾಸ್, ಸದಸ್ಯರಾದ ನರೇಂದ್ರಹೆಗ್ಡೆ, ಸುಮಿತ್ರ ಮುರಳೀಧರ್ ಅವರನ್ನು ಅಭಿನಂದಿಸಲಾಯಿತು.
ಶ್ರೀಮಠದ ಅಧಿಕಾರಿ ಶ್ರೀಪಾದರಾವ್ ಜನಪ್ರತಿನಿಧಿಗಳನ್ನು ಅಭಿನಂದಿಸಿ, ಸಾಮಾನ್ಯ ಜನರ ಆಶೋತ್ತರಗಳಿಗೆ, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಜನಮಾನಸದಲ್ಲಿ ತಮ್ಮ ಸೇವೆ ಉಳಿಯುವಂತಾಗಲೆಂದು ಹಾರೈಸಿದರು. ಶೈಲಜಾ ರತ್ನಾಕರ ಹೆಗ್ಡೆ ಅವರ ಅಧ್ಯಕ್ಷತೆಯನ್ನು ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮಣ ಬಾಪಟ್, ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಬಿ.ಎಲ್. ರವಿಕುಮಾರ್, ಕಾರ್ಯದರ್ಶಿ ಚಂದ್ರಶೇಖರ್, ಜಿಪಂ ಸದಸ್ಯ, ಎಚ್.ಆರ್. ಕೃಷ್ಣಮೂರ್ತಿ, ಪರಾಶರ, ತಾಲ್ಲೂಕು ಪಂಚಾಯಿತಿ ಸದಸ್ಯ ಉಮೇಶ್ ತಲಗಾರು, ಗಣೇಶ್ ಆಚಾರ್ಯ, ಸುಬ್ರಹ್ಮಣ್ಯಾಚಾರ್ ಇದ್ದರು.