ಕಡೂರು: ‘ಕಡೂರಿನಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಬೇಕು ಎಂಬ ಆಶಯದಿಂದ ಕಡೂರನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದೇನೆ’ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಮತ್ತು ಮೂಲ ಸೌಲಭ್ಯಗಳ ನಿಗಮದ ಅಧ್ಯಕ್ಷ ಸಿ.ಎಂ.ಧನಂಜಯ ತಿಳಿಸಿದರು.
ಕಡೂರು ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಈಚೆಗೆ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು. ‘30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಯುವ ಘಟಕದ ಕಾರ್ಯ ದರ್ಶಿಯಾಗಿ, ಕಾನೂನು ಘಟಕದ ಅಧ್ಯಕ್ಷನಾಗಿಯೂ ದುಡಿದಿದ್ದು, ಪ್ರಸ್ತುತ ನಿಗಮದ ಅಧ್ಯಕ್ಷನಾಗಿದ್ದೇನೆ. ಈ ಹುದ್ದೆ ಕೇವಲ ಐಎಎಸ್ ಅಧಿಕಾರಿಗಳು ಅಥವಾ ಶಾಸಕರಿಗೆ ಮಾತ್ರ ಸಿಗುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೂ ಉನ್ನತ ಹುದ್ದೆ ಪಡೆಯಬಹುದು ಎಂಬುದಕ್ಕೆ ನಾನೇ ಸಾಕ್ಷಿ. ಈ ಸಂದರ್ಭದಲ್ಲಿ ಕಡೂರು ಕ್ಷೇತ್ರ ವನ್ನು ನನ್ನ ಕರ್ಮಭೂಮಿ ಯನ್ನಾಗಿ ಆಯ್ಕೆ ಮಾಡಿಕೊಂಡಿ ದ್ದೇನೆ’ ಎಂದರು.
‘ಕಡೂರು ಅತಿ ಹಿಂದುಳಿದ ತಾಲ್ಲೂಕಾಗಿದ್ದು ನಿರುದ್ಯೋಗದ ಸಮಸ್ಯೆಯಿದೆ. ಇದನ್ನು ಸ್ವಲ್ಪವಾದರೂ ಕಡಿಮೆ ಮಾಡಲು ಕೈಗಾರಿಕೆ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ. ತಾಲ್ಲೂಕಿನ ತೆಂಗು, ಅಡಿಕೆ ಬೆಳೆಗಾರರಿಗೆ ಶಾಶ್ವತ ನೀರಾವರಿ ಯೋಜಜಗಳು ಅತೀ ಮುಖ್ಯವಾಗಿದೆ. ಹೆಬ್ಬೆ ಯೋಜನೆ ಕೈಬಿಟ್ಟಿದ್ದರೂ ಪರ್ಯಾಯ ಯೋಜನೆ ರೂಪಿಸಲು ಸಚಿವ ಎಂ.ಬಿ.ಪಾಟೀಲ ಅವರನ್ನು ಕರೆತಂದು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.
‘2018ರ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಧ್ವಜ ಜಿಲ್ಲೆಯಲ್ಲಿ ಅರಳಬೇಕು. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ ಸಮಯದಲ್ಲಿ ನಡೆದ ಗಲಾಟೆ ಚಿಕ್ಕ ವಿಷಯ. ಅದೊಂದು ರೀತಿ ಕುಟುಂಬ ಜಗಳವಿದ್ದಂತೆ. ಅವೆಲ್ಲವನ್ನೂ ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಿದ್ದೇವೆ. ಒಟ್ಟಾರೆಯಾಗಿ ನಾವೆಲ್ಲರೂ ಕಾಂಗ್ರೆಸ್ ಕುಟುಂಬದವರು.
ಚುನಾವಣೆಯ ಅಭ್ಯರ್ಥಿಯನ್ನು ಘೋಷಿಸುವುದು ಹೈಕಮಾಂಡ್. ಅದರ ತೀರ್ಮಾನವೇ ಅಂತಿಮ, ಸದ್ಯ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಷ್ಟೇ ನನ್ನ ಆಧ್ಯತೆಯಾಗಿದೆ’ ಎಂದ ಅವರು, ಕಡೂರು ಪಟ್ಟಣದಲ್ಲಿ ಮಾನವ ಹಕ್ಕುಗಳ ರಾಜ್ಯ ಸಮಾವೇಶವನ್ನು ನಡೆಸುವ ಉದ್ದೇಶವಿದೆ ಎಂದರು. ಎಂಆರ್ಎಂ ಶಿವಣ್ಣ, ಗುತ್ತಿಗೆದಾರ ಕೆ.ಇ.ಹಿರಿಯಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.