ತರೀಕೆರೆ: ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ಮತ್ತು ಭತ್ಯೆ ನೀಡಬೇಕು ಎಂದು ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ನಾಗರಾಜ್ ಒತ್ತಾಯಿಸಿದರು.ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, 2001ರ ಜನಗಣತಿಯ ಆಧಾರದ ಮೇಲೆ ಜಿಲ್ಲಾ ಮತ್ತು ತಾಲ್ಲೂಕುಗಳನ್ನು ಪುನರ್ ವಿಂಗಡಿಸಿ ಮನೆ ಬಾಡಿಗೆ ಭತ್ಯೆ ಮತ್ತು ಇತರೆ ಸೌಲಭ್ಯವನ್ನು ನೀಡುವಂತೆ ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಟೀಕೇಶ್ವರ್ ಮಾತನಾಡಿ, 2006ರಿಂದ ರಾಜ್ಯ ಸರ್ಕಾರಿ ನೌಕರರಿಗೆ ಉಂಟಾಗಿರುವ ಆರ್ಥಿಕ ನಷ್ಟ ಭರಿಸಲು ಮತ್ತು ಕೇಂದ್ರ,ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನ ಭತ್ಯೆ ವ್ಯತ್ಯಾಸ ಸರಿದೂಗಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಾದರಿಯಲ್ಲಿ 2006ರಿಂದ ಅನ್ವಯಿಸುವಂತೆ ವೇತನ ಭತ್ಯೆ ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ಅರಣ್ಯ ಇಲಾಖೆಯಲ್ಲಿ ಕಳೆದ 20ವರ್ಷದಿಂದ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ನೌಕರರು ಯಾವುದೇ ಸೇವಾ ಭದ್ರತೆಯಿಲ್ಲದೆ ಪರಿತಪಿಸುತ್ತಿದ್ದಾರೆ ಸರ್ಕಾರ ಕೂಡಲೆ ಅವರ ನೆರವಿಗೆ ಬರಬೇಕೆಂದು ಅವರು ಮನವಿ ಮಾಡಿದರು.
ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಟಿ.ಟಿ.ಗೋವಿಂದಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಇ.ಎಸ್.ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಇ. ಉಮೇಶ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಪದಾಧಿಕಾರಿಗಳಾದ ಸೇವ್ಯಾನಾಯ್ಕ, ಎಸ್,ವಿ.ನಾಗರಾಜ್, ಎನ್. ಎಸ್.ನಿಜಗುಣ, ಎಸ್.ಎಚ್.ಲೋಕೇಶ್ ಮತ್ತು ಇತರರು ಇದ್ದರು.