ಸಕಲೇಶಪುರ: ಮಾನವೀಯ ಮೌಲ್ಯ ಎತ್ತಿ ಹಿಡಿಯಲು ಕ್ರಾಂತಿ ಮಾಡಿದ್ದ ವಚನ ಸಾಹಿತ್ಯಕ್ಕೆ ಜಾತಿ ಸೂಚಕತೆ ಅಲ್ಲಲ್ಲಿ ಕಂಡು ಬರುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಮೈಸೂರು ವಿಭಾಗದ ಅಧ್ಯಕ್ಷ ಪ್ರೊ. ಬಿ.ಎನ್.ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದರು.ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ತಾಲ್ಲೂಕು ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಜಾತಿಯಿಂದ ಮನುಷ್ಯರನ್ನು ಮೇಲು ಕೀಳು ಎಂದು ಕಾಣುತ್ತಿದ್ದ ಸಮಾಜವನ್ನು ವಚನ ಸಾಹಿತ್ಯ ಧಿಕ್ಕರಿಸುತ್ತಾ ಬಂದಿದೆ. ವಚನ ಸಾಹಿತ್ಯಕ್ಕೆ ಒಂದು ಜಾತಿಯ ಧಾರ್ಮಿಕ ಚಳವಳಿಯ ಗೊಡೆ ಕಟ್ಟಿದರೆ ಅಪರಾಧವಾದೀತು ಎಂದರು.ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಅಕಾಡೆಮಿ ಜಿಲ್ಲಾ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಅಕಾಡೆಮಿ ಜಿಲ್ಲಾ ಗೌರವ ಅಧ್ಯಕ್ಷ ತೀ.ರಾಮಕೃಷ್ಣಯ್ಯ, ಕಸಾಪ ಜಿಲ್ಲಾಧ್ಯಕ್ಷ ಪ್ರಸಾದ್ ರಕ್ಷಿದಿ, ಮಾನವೀಯ ಮಹಿಳಾ ಅಧ್ಯಯನ ಕೇಂದ್ರದ ಜಿಲ್ಲಾ ಅಧ್ಯಕ್ಷೆ ಕೆ.ಟಿ.ಜಯಶ್ರಿ, ಸಾಹಿತಿ ಚಂದ್ರಶೇಖರ್ ಧೂಳೇಕರ್, ವಚನ ಸಾಹಿತ್ಯ ಅಕಾಡೆಮಿ ತಾಲ್ಲೂಕು ಗೌರವ ಅಧ್ಯಕ್ಷ ದುಲ್ರಾಜ್ ಜೈನ್, ಹಾಸನದ ತವರಿನ ತೊಟ್ಟಿಲು ಕೇಂದ್ರದ ವೈದ್ಯ ಡಾ.ಪಾಲಾಕ್ಷ ಮಾತನಾಡಿದರು.