ಚಿಕ್ಕಮಗಳೂರು: ‘ಟಿಪ್ಪು ಸುಲ್ತಾನ್ ಮತಾಂಧ, ಕನ್ನಡ ವಿರೋಧಿ, ಜಾತ್ಯತೀತ ತತ್ವಗಳ ವಿರೋಧಿ. ಟಿಪ್ಪು ಜಯಂತ್ಯುತ್ಸವ ಆಚರಣೆಯನ್ನು ಸರ್ಕಾರ ಕೈಬಿಡಬೇಕು’ ಎಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದರು. ಟಿಪ್ಪು ಜಯಂತ್ಯುತ್ಸವ ವಿರೋಧಿಸಿ ನಗರದ ಬಿಜೆಪಿ ಕಚೇರಿ ಬಳಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದ ಎಂಬ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಹಣೆಪಟ್ಟಿ ಕಟ್ಟಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆದರೂ, ರಾಜ್ಯ ಸರ್ಕಾರವು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಪ್ರತಿಪಾದಿಸುತ್ತಿದೆ. ಟಿಪ್ಪು ಸಹಸ್ರಾರು ಮಂದಿಯನ್ನು ಮತಾಂತರ ಮಾಡಿದ್ದ ಬಗ್ಗೆ ಟಿಪ್ಪು ಮಗ ಪ್ರಿನ್ಸ್ ಫಿರೋಜ್ ಅಹಮದ್ ಖಾನ್ ಬರೆದಿರುವ ದಾಖಲೆ ಇದೆ. ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಈ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ’ ಎಂದು ಸವಾಲು ಹಾಕಿದರು.
‘ಟಿಪ್ಪು ನಡೆಸಿದ ಕ್ರೌರ್ಯವನ್ನು ಇತಿಹಾಸ ತಜ್ಞ ಕೆ.ಎಂ.ಫಣಿಕ್ಕರ್ ಅವರು ಬರಹದಲ್ಲಿ ಉಲ್ಲೇಖಿಸಿದ್ದಾರೆ. ಚರ್ಚ್ಗಳು, ದೇಗುಲಗಳನ್ನು ನಾಶ ಮಾಡಿದ್ದನ್ನು ದಾಖಲೆಗಳಲ್ಲಿ ಬಿಚ್ಚಿ ಟ್ಟಿದ್ದಾರೆ. ಹಲವಾರು ಊರುಗಳ ಹೆಸರನ್ನು ಪರ್ಷಿಯನ್ ಭಾಷೆಗೆ ಬದಲಾ ಯಿಸಿದ್ದು, ಪಾರ್ಸಿ ನಾಣ್ಯಗಳನ್ನು ಜಾರಿ ಮಾಡಿದ್ದು, ಪಾರ್ಸಿ ಮತ್ತು ಉರ್ದು ಭಾಷೆಯನ್ನು ಅಧಿಕೃತ ಆಡಳಿತ ಭಾಷೆ ಯಾಗಿ ಘೋಷಿಸಿದ್ದು ಟಿಪ್ಪು’ ಎಂದರು.
‘ಟಿಪ್ಪುವಿನ ಮತಾಂಧತೆಯ ಭೂತ ಅವರಿಗೆ ಸಿದ್ದರಾಮಯ್ಯ ಅವರಿಗೆ ಆವರಿಸಿಕೊಂಡಿದೆ, ಕೆಟ್ಟ ಬುದ್ಧಿ ಮೆತ್ತಿಕೊಂಡಿದೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಹಿಂದು ಮತ್ತು ಮುಸ್ಲಿಮರ ನಡುವೆ ಜಗಳ ಹಚ್ಚುತ್ತಿದ್ದಾರೆ. ಇತಿಹಾಸ ತಿರುಚಿ ದ್ದಾರೆ. ಚರಿತ್ರೆಯ ಸತ್ಯ ಹೇಳುವ ವರನ್ನು ಕೋಮವಾದಿಗಳು ಎಂದು ಜರೆಯುತ್ತಿದ್ದೀರಿ. ಟಿಪ್ಪುವಿನ ವಿರುದ್ಧ ಮದಕರಿನಾಯಕ, ಕೊಡವರು, ಮಲಬಾರಿನ ಅರಸರು ಮಂಗಳೂರಿನ ಕ್ರಿಶ್ಚಿಯನ್ನರು ಹೋರಾಟ ಮಾಡಿದ್ದರು. ಅವೆರಲ್ಲರನ್ನು ದೇಶದ್ರೋಹಿಗಳು ಎಂದು ಕರೆಯುತ್ತೀರಾ’ ಎಂದು ಪ್ರಶ್ನಿಸಿದರು.
‘ಸದನದಲ್ಲಿ ವ್ಯಾಕರಣ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇತಿಹಾಸದ ಅರಿವು ಇಲ್ಲವೇ? ಸರ್ದಾರರಿಗೆ, ಅಫ್ಗಾನಿಸ್ತಾನದ ರಾಜರಿಗೆ ಟರ್ಕಿ ಸುಲ್ತಾನರಿಗೆ ಟಿಪ್ಪು ಬರೆದಿರುವ ಪತ್ರಗಳು ಇಂಗ್ಲೆಂಡ್ನ ಇಂಡಿಯನ್ಬ್ರಿಟಿಷ್ ಲೈಬ್ರರಿಯಲ್ಲಿ ಇವೆ. ಈ ದಾಖಲೆಗಳನ್ನು ಶೋಧಿಸಿದರೆ ಸತ್ಯಾಂಶ ಗೊತ್ತಾಗುತ್ತದೆ’ ಎಂದು ಹೇಳಿದರು.
‘ನಿಜವಾದ ಕಾಳಜಿ ಇದ್ದರೆ ಸಂತಶಿಶುನಾಳ ಷರೀಫ, ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಜಯಂತ್ಯುತ್ಸವಗಳನ್ನು ಆಚರಣೆ ಮಾಡಿ. ನಾಡು ಕಟ್ಟುವ ಕೆಲಸ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್, ಕೃಷ್ಣದೇವರಾಯ, ಮದಕರಿ ನಾಯಕರಂಥವರ ಜಯಂತಿಯನ್ನು ಸರ್ಕಾರದ ಆಚರಣೆ ಮಾಡುತ್ತಿಲ್ಲ. ಮತಾಂಧ ಟಿಪ್ಪು ಜಯಂತಿಯನ್ನೇ ಏಕೆ ಆಚರಿಸುತ್ತೀರಿ’ ಎಂದು ಪ್ರಶ್ನಿಸಿದರು.
‘ಟಿಪ್ಪು ಜಯಂತಿ ವಿರುದ್ಧ ಜನಾಭಿಪ್ರಾಯವನ್ನು ಮುಂದುವರಿ ಸುತ್ತೇವೆ. ಹೋರಾಟವನ್ನು ಮುಂದು ವರಿಸುತ್ತೇವೆ’ ಎಂದರು. ಬಿಜೆಪಿ ಮುಖಂಡರಾದ ಎಚ್.ಡಿ.ತಮ್ಮಯ್ಯ, ಪುಷ್ಪರಾಜ್, ಸುಧೀರ್, ದೇವರಾಜ ಶೆಟ್ಟಿ, ವರಸಿದ್ಧಿ ವೇಣುಗೋಪಾಲ್, ಪ್ರೇಮ್ಕುಮಾರ್, ಕೆ.ಎಂ.ಶಿಲ್ಪಾ ರಾಜಶೇಖರ್, ಕವಿತಾ ಶೇಖರ್, ಸಿ.ಎಚ್.ಲೋಕೇಶ್. ಕೋಟೆ ರಂಗನಾಥ್, ಯೋಗಿಶ್ ರಾಜ ಅರಸ್, ಬಜರಂಗದಳ ಜಿಲ್ಲಾ ಸಂಚಾಲಕ ತುಡುಕೂರು ಮಂಜು, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.