ಚಿಕ್ಕಮಗಳೂರು:ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ರೈಲ್ವೆ ಬಜೆಟ್ ಮಂಡಿ ಸಿದಂತೆ ರಾಜ್ಯದಲ್ಲೂ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿ ಸುವಂತೆ ಮುಖ್ಯ ಮಂತ್ರಿಗಳನ್ನು ಕೋರಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದ ಜನರಿಗೆ ಅನ್ನ ನೀಡುವ, ಆಹಾರ ಭದ್ರತೆ ಜತೆಗೆ ಉದ್ಯೋಗ ಭದ್ರತೆಯನ್ನು ಒದಗಿಸುವ ಕೃಷಿ ವಲಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯತೆ ಇರುವುದರಿಂದ ಕಳೆದ ವಾರ ಸಮಾನ ಮನಸ್ಕ ಶಾಸಕರೊಂದಿಗೆ ಚರ್ಚಿಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷದ ವೇದಿಕೆಯಲ್ಲೂ ಚರ್ಚೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಕಾಫಿ ಕಣಿವೆ ಎಂದು ಹೆಸರು ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ತೋಟ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸುಸಜ್ಜಿತ ಇಎಸ್ಐ ಆಸ್ಪತ್ರೆಯನ್ನು ತೆರೆಯುವಂತೆ ಕೇಂದ್ರ ಮತ್ತು ರಾಜ್ಯ ಕಾರ್ಮಿಕ ಸಚಿವರನ್ನು ಕೋರಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಭಾನುವಾರ ಕಾಫಿ ಬೆಳೆಗಾರರ ಸಮಸ್ಯೆ ಕುರಿತು ನಡೆದ ಸಮಾಲೋ ಚನಾ ಸಭೆಯಲ್ಲಿ ಬೆಳೆಗಾರರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಕಾರ್ಮಿಕರ ಆರೋಗ್ಯ ಸುರಕ್ಷತೆಗೆ ಒತ್ತು ನೀಡುವ ಸಲುವಾಗಿ ಕಾರ್ಮಿಕರಿಗೆ ಅನುಕೂಲವಾಗುವಂತೆ ನಗರದಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆಯಲು ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಬಾರಿ ಬಜೆಟ್ ಮಂಡಿಸುವಾಗ ದೇವನೂರಿನಲ್ಲಿ ಟೆಕ್ಸ್ಟೈಲ್ಸ್ ಪಾರ್ಕ್ ನೀಡಲು ಮುಖ್ಯಮಂತ್ರಿಗಳನ್ನು ಕೋರ ಲಾಗಿದೆ. ಕಡೂರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಒಳಪಡುವ ಸುಮಾರು 6ರಿಂದ 7ಸಾವಿರ ಕುಟುಂಬಗಳ ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿ ಅಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿವೆ.ಸ್ವಂತ ಕುಟುಂಬ ಕಟ್ಟಿಕೊಳ್ಳಲಾಗದೆ, ಒಣ ಭೂಮಿ ನಂಬಿ ಬದುಕು ಸಾಗಿಸಲಾಗದೆ ಅತಂತ್ರ ಸ್ಥಿತಿಯಲ್ಲಿರುವ ಈ ಭಾಗದ ಜನರಿಗೆ ಅನುಕೂಲ ವಾಗುವಂತೆ ಟೆಕ್ಸ್ಟೈಲ್ಸ್ ಪಾರ್ಕ್ ನೀಡುವಂತೆ ಬೇಡಿಕೆ ಮುಂದಿಡಲಾಗಿದೆ ಎಂದು ಅವರು ಹೇಳಿದರು.
ಉದ್ದೇಶಿತ ಗ್ರಾಮೀಣ ವಿಶ್ವವಿದ್ಯಾ ಲಯವನ್ನು ಚಿಕ್ಕಮಗಳೂರಿನಲ್ಲೇ ಆರಂಭಿಸಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದಿಡಲಾಗಿದೆ. ಜನಪದ ಸಂಸ್ಕೃತಿ ಉಳಿಸುವ ಹಾಗೂ ಗ್ರಾಮೀಣ ಕಸುಬುಗಳಿಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ರೈತರು ಸೇರಿದಂತೆ ಕಾಫಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಶೇ 3ರ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ ಅದರಂತೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬೆಳಗಾರರೂ ಒಳ ಗೊಂಡಂತೆ ರೈತರಿಗೆ ಅಭಿವೃದ್ಧಿ ಸಾಲ ವನ್ನು ಶೇ 3ರ ಬಡ್ಡಿದರದಲ್ಲಿ ನೀಡುವ ನೀತಿಯನ್ನು ಅಳವಡಿಸುವಂತೆ ಒತ್ತಾಯಿ ಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಕಾಫಿ ಪ್ಯಾಕೇಜ್ ಅನುಷ್ಠಾನ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಅದನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆಯೇ ಹೊರತು ಅನುಷ್ಠಾನದ ಬಗ್ಗೆ ಹೆಚ್ಚಿನ ಆಸಕ್ತಿ ತಾಳಿದಂತೆ ಕಂಡು ಬರುತ್ತಿಲ್ಲ. ಆರ್ಬಿಐ ಅನುಮತಿ ನೀಡಿಲ್ಲವೆಂಬ ಸಬೂಬನ್ನು ಹೇಳದೆ ಅನುಷ್ಠಾನಗೊಳಿಸಲು ಹೆಚ್ಚಿನ ಅಸಕ್ತಿ ವಹಿಸಬೇಕೆಂದು ಆಗ್ರಹಿಸಿದರು.
ಕಾಫಿ ಪ್ಯಾಕೇಜ್ ಸಮರ್ಪಕವಾಗಿ ಅನುಷ್ಠಾನಗೊಳ್ಳದಿದ್ದರೆ ಸಹಕಾರ ಬ್ಯಾಂಕುಗಳ ಎನ್ಪಿಎ ಆಗುವ ಸಾಧ್ಯತೆಗಳಿವೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು. ಕಾಫಿ ತೋಟಗಳಲ್ಲಿ ಬಳಕೆ ಮಾಡುವ ಸ್ಪ್ರೇಯರ್, ಸ್ಪ್ರಿಂಕ್ಲರ್ ಸೇರಿದಂತೆ ಇತರೆ ವಸ್ತುಗಳಿಗೆ ಶೇ 12ರಿಂದ 16ರಷ್ಟು ವ್ಯಾಟ್ ತೆರಿಗೆ ವಿಧಿಸಲಾಗುತ್ತಿದೆ. ದೇಶದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಡುವುದು ಕಾಫಿ ಹಾಗಾಗಿ ಪ್ಲಾಂಟೇಷನ್ಲ್ಲಿ ಬಳಕೆ ಮಾಡುವ ವಸ್ತುಗಳ ವ್ಯಾಟನ್ನು ಶೇ 4ಕ್ಕೆ ಇಳಿಸಬೇಕೆಂದು ಅವರು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.