ಬೀರೂರು: ಮಕ್ಕಳ ಅಭಿವೃದ್ಧಿಯಲ್ಲಿ ಶಾಲೆಯಷ್ಟೇ ಪೋಷಕರ ಪಾತ್ರವೂ ಮುಖ್ಯವಾದದ್ದು ಎಂದು ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಕಿತ್ತೂರು ಚನ್ನಮ್ಮ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ರಮುಕ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಗಳು ಮಕ್ಕಳ ಭವಿಷ್ಯ ರೂಪಿಸಲು ವಿದ್ಯೆ ಕಲಿಸುವ ಮೂಲಕ ಶ್ರಮಿಸಿದರೆ ಪೋಷಕರು ಉತ್ತಮ ಸಂಸ್ಕಾರ ನೀಡುವ ಮೂಲಕ ಅವರನ್ನು ಮುಂದಿನ ಹೆಮ್ಮೆಯ ಪ್ರಜೆಗಳಾಗಿ ರೂಪಿಸಲು ಸಹಕರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಜಯಣ್ಣ ಮಾತನಾಡಿ, ಕನ್ನಡ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಮೂರೂ ಶಾಲೆಗಳು ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿವೆ. ಗುಣಮಟ್ಟದ ಶಿಕ್ಷಣದಿಂದ ಶೈಕ್ಷಣಿಕ ವಲಯದಲ್ಲಿ ಉತ್ತಮ ಹೆಸರು ಬಂದಿದೆ. ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ಆಟೋಟಗಳನ್ನು ಯಶಸ್ವಿಯಾಗಿ ನಡೆಸಿ, ರಾಜ್ಯಪ್ರಶಸ್ತಿ ಗಳಿಸಿ ಊರಿಗೆ ಮತ್ತು ಜಿಲ್ಲೆಗೆ ಹೆಸರು ತಂದಿದ್ದು ಮಾದರಿ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.
ಲಲಿತಮ್ಮ ಶ್ರೀಕಂಠಪ್ಪ ಕಾರ್ಯಕ್ರಮ ಉದ್ಘಾಟಿಸಿ ಬಹುಮಾನ ವಿತರಿಸಿದರು. ಕನ್ನಡಸಂಘದ ಕಾರ್ಯದರ್ಶಿ ಟಿ.ಆರ್.ಸತೀಶ್, ಶಾಲಾ ಆಡಳಿತಾಧಿ ಕಾರಿ ಪಿ.ನಿಂಗಪ್ಪ ಮತ್ತು ಕನ್ನಡ ಸಂಘದ ಸದಸ್ಯರು, ಪೋಷ ಕರು ಹಾಗೂ ಶಾಲಾ ಸಿಬ್ಬಂದಿ ಇದ್ದರು.