ಶೃಂಗೇರಿ: ಇಲ್ಲಿ ಕುವೆಂಪು ಬಸ್ ನಿಲ್ದಾಣ ಆರಂಭವಾದ ನಂತರ ಪಟ್ಟಣದ ಮಲ್ಲಿಕಾರ್ಜುನ ಬೀದಿಯಲ್ಲಿ ಪ್ರತಿ ದಿನವೂ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಪಟ್ಟಣದಲ್ಲಿರುವ ಮುಖ್ಯರಸ್ತೆಗಳಲ್ಲಿ ಕಿರಿದಾದ ರಸ್ತೆಯಾಗಿರುವ ಮಲ್ಲಿಕಾರ್ಜುನ ಬೀದಿಯು ಅತಿ ಹೆಚ್ಚು ಜನಸಂಚಾರ ಹಾಗೂ ವಾಹನ ಸಂಚಾರವಿದೆ. ಅಂಗಡಿ ಮುಂಗಟ್ಟುಗಳ ಮುಂದೆ ವಾಹನ ನಿಲುಗಡೆ ಆಗುವುದರಿಂದ ಟ್ರಾಫಿಕ್ ಸಮಸ್ಯೆ ಸಾಮಾನ್ಯವಾಗಿದೆ. ಪಟ್ಟಣದ ಮುಖ್ಯರಸ್ತೆ ಭಾರತೀ ಬೀದಿಯಿಂದ ಹಾಗೂ ತುಂಗಾನದಿ ದಂಡೆಯ ಬೈಪಾಸ್ನಿಂದ ಬಸ್ ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಈ ರಸ್ತೆ ಹೆಚ್ಚು ಬಳಕೆಯಾಗುತ್ತಿದೆ.
ಪಟ್ಟಣದ ಬಹುತೇಕ ರಸ್ತೆ ಪೂರ್ಣ ಪ್ರಮಾಣದಲ್ಲಿ ಡಾಂಬರಿಕರಣವಾಗಿದ್ದು, ಕೆಲ ರಸ್ತೆಗಳು ಕಾಂಕ್ರೀಟಿಕರಣಗೊಂಡಿವೆ. ಆದರೆ, ಮಲ್ಲಿಕಾರ್ಜುನ ರಸ್ತೆ ಮಾತ್ರ ಕೇವಲ ಒಂಬತ್ತು ಅಡಿ ಅಗಲದ ಡಾಂಬರು ಕಂಡಿದೆ. ರಸ್ತೆಯು ಇರುವಷ್ಟು ಅಗಲವೂ ಡಾಂಬರೀಕರಣವಾಗಿದ್ದರೆ ಸಂಚಾರಕ್ಕೂ ಸುಗಮವಾಗುತ್ತಿತ್ತು.
ಆದರೆ, ರಸ್ತೆ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ. ‘ಈ ರಸ್ತೆಯಲ್ಲಿ ಅನಗತ್ಯ ಹಂಪ್ಗಳು ಸಂಚಾರಕ್ಕೆ ತೊಡಕಾಗುತ್ತಿದೆ. ವಾಹನ ನಿಲುಗಡೆ ಕೇವಲ ಒಂದೇ ಕಡೆ ಇರುವುದರಿಂದ ಮತ್ತೊಂದು ಕಡೆ ವಾಹನ ನಿಲುಗಡೆಯಾದಾಗ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಬಸ್ ನಿಲ್ದಾಣದಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ತೆರಳುವುದರಿಂದ ಬೆಳಿಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಬಸ್ ನಿಲ್ದಾಣಕ್ಕೆ ತೆರಳುವ ಹಾಗೂ ನಿಲ್ದಾಣದಿಂದ ಪಟ್ಟಣಕ್ಕೆ ಬರುವ ಸಾರ್ವಜನಿಕರು ಈ ರಸ್ತೆಯಲ್ಲಿ ದಟ್ಟಣೆ ಹೆಚ್ಚು.
ಈ ರಸ್ತೆಯಲ್ಲಿ ಬಿಇಒ ಕಚೇರಿ, ಎರಡು ಶಾಲೆಗಳು, ಗ್ಯಾರೇಜ್, ಗೊಬ್ಬರದ ಗೋದಾಮುಗಳು, ಸ್ಟುಡಿಯೋಗಳು ಇದ್ದು, ಕಿರಿದಾದ ರಸ್ತೆ ಆಗಾಗ್ಗೆ ಟ್ರಾಫಿಕ್ ಜಾಮ್ ಆಗಲು ಕಾರಣವಾಗುತ್ತಿದೆ’ ಎಂಬುದು ಸ್ಥಳೀಯರ ದೂರು.