ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಹೆಬ್ಬೆ ವಲಯದಲ್ಲಿ ಶುಕ್ರವಾರ ಕೊಳೆತ ಸ್ಥಿತಿಯಲ್ಲಿ ಗಂಡು ಹುಲಿಯ ಕಳೇಬರ ಪತ್ತೆಯಾಗಿತ್ತು. ಹುಲಿಗಳ ಕಾದಾಟದಲ್ಲಿ ಅದು ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದು ಬಂದಿದೆ.
ಇದು 7 ರಿಂದ 8 ವರ್ಷದ ಹುಲಿ ಯಾಗಿದ್ದು, ಬಲಿಷ್ಠ ಹುಲಿಯೊಂದಿಗಿನ ಕಾದಾಟದಲ್ಲಿ ಸಾವನ್ನಪ್ಪಿದೆ. ಹುಲಿಯ ಕುತ್ತಿಗೆ ಮತ್ತು ಬುಜಭಾಗದ ಮೇಲೆ ಹುಲಿ ಕಚ್ಚಿದ ಗುರುತುಗಳಿರುವುದು, ಮುಂಭಾಗದ ಎಡಗಾಲಿನಲ್ಲೂ ಉಗುರು ಚುಚ್ಚಿದ ಗುರುತುಗಳಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.
ತ್ಯಾವರೆಕೊಪ್ಪ ಸಿಂಹಧಾಮದ ವನ್ಯಜೀವಿ ವೈದ್ಯಾಧಿಕಾರಿ ವಿನಯ್, ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ. ಜಯರಾಮ್ ತಂಡದವರು ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿದರು.
ಭದ್ರಾ ಹುಲಿ ಮೀಸಲು ಅರಣ್ಯ ಸಂರ ಕ್ಷಣಾಧಿಕಾರಿ ಕೆ.ಎಂ. ನಾರಾಯಣ ಸ್ವಾಮಿ, ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿ ಜಿ.ವೀರೇಶ್, ಹೆಬ್ಬೆ ವಲಯದ ಅರಣ್ಯಾಧಿಕಾರಿ ರವೀಂದ್ರ, ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ಮುಖ್ಯಸ್ಥ ಡಿ.ವಿ.ಗಿರೀಶ್ ಇದ್ದರು.