ಚಿಕ್ಕಮಗಳೂರು: ‘ನರೇಂದ್ರ ಮೋದಿ ಎದುರಿಸಲು ಶಕ್ತಿ ಯಾರಿಗಿದೆ? ಎನ್ನುವ ಪ್ರಶ್ನೆ ಹುಟ್ಟು ಹಾಕುತ್ತಿದ್ದಾರೆ. ಮೋದಿ ಎದುರಿಸುವ ಶಕ್ತಿ ನಮಗಿದೆ. ಮೋದಿ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗುಡುಗಿದರು.
ನಗರದಲ್ಲಿ ಶುಕ್ರವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲೂ ‘ಅಹಿಂದ’ ಪದ ಪ್ರಯೋಗ ಮಾಡುತ್ತಲೇ ಇದ್ದಾರೆ. ಹಿಂದೂಸ್ತಾನದಲ್ಲಿ ಯಾವ ರಾಜಕೀಯ ಪಕ್ಷ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದೆ ಹೇಳಿ? ‘ಅಹಿಂದ’ ವರ್ಗಕ್ಕೆ ಮೀಸಲಾತಿ ನೀಡಿದ್ದು ಮೊದಲು ನಾವು. ಮುಸ್ಲಿಮರಿಗೆ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡಿದ್ದು ನಾವೆ. ಮುಸ್ಲಿಮರನ್ನು ನಂಬದಿದ್ದರೆ ಈ ದೇಶದಲ್ಲಿ ಇನ್ಯಾರನ್ನು ನಂಬಲು ಸಾಧ್ಯ?’ ಎಂದು ಪ್ರಶ್ನಿಸಿದರು.
‘ತುಳಿತಕ್ಕೆ ಸಿಕ್ಕಿದ ವರ್ಗ ಗುರುತಿಸಲು ಹೆಗ್ಡೆ, ಇಂದಿರಾಗಾಂಧಿಯಿಂದ ನಾವು ಕಲಿಯಬೇಕಿರಲಿಲ್ಲ. ಇಂದಿರಾ 15 ವರ್ಷ ದೇಶ ಆಳಿದರೂ ಮಹಿಳೆಯರಿಗೆ ಮೀಸಲಾತಿ ನೀಡಲಿಲ್ಲ. 130 ವರ್ಷ ಇತಿಹಾಸದ ಕಾಂಗ್ರೆಸ್ ಪ್ರತಿನಿಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಅಹಿಂದ ವರ್ಗಕ್ಕೆ ರೂಪಿಸಿದ ಕಾರ್ಯಕ್ರಮ ಜಾರಿಗೊಳಿಸಿದರೆ ನಾನು ನಾಳೆಯೇ ಅವರಿಗೆ ತಲೆಬಾಗುತ್ತೇನೆ’ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮತ್ತು ಬಿಜೆಪಿಗೆ ವಿರುದ್ಧವಾಗಿ ಜನಪರವಾದ ಕಾರ್ಯಕ್ರಮ ರೂಪಿಸಿರುವ ಪಕ್ಷವನ್ನು ಹಾಳು ಮಾಡಬೇಡಿ. ಈ ಪಕ್ಷ ಉಳಿಸಬೇಕು. ರಾಜ್ಯದಲ್ಲಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತಂದ ಮೇಲೆಯೇ ರಾಜಕೀಯ ನಿವೃತ್ತಿ ಪಡೆಯುವುದು ಎಂದು ಪುನರುಚ್ಚರಿಸಿದರು.
ಚಿಕ್ಕಮಗಳೂರು–ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಕಣಕ್ಕಿಳಿಸಬೇಕೆ? ಬೇಡವೇ? ಎನ್ನುವ ಪ್ರಶ್ನೆಯನ್ನು ದೇವೇಗೌಡ ಅವರು, ಮುಖಂಡರ ಮುಂದಿಟ್ಟಾಗ, ಅಭ್ಯರ್ಥಿ ಕಣಕ್ಕಿಳಿಸಲೇಬೇಕೆಂದು ಮುಖಂಡರು ಒಕ್ಕೊರಲ ಮನವಿ ಮಾಡಿದರು. ಸ್ಥಳೀಯ ಮುಖಂಡರಾದ ಎಚ್.ಟಿ.ರಾಜೇಂದ್ರ, ಮಾಜಿ ಶಾಸಕ ಧರ್ಮೇಗೌಡ, ಎಚ್.ಎಚ್.ದೇವರಾಜ್ ಅವರನ್ನು ಕುರಿತು ‘ನೀವೆಲ್ಲ ನಿವೃತ್ತರಾಗಿದ್ದೀರಾ? ನಿಮಗೆಲ್ಲ ವಯಸ್ಸಾಗಿದೆಯೇ? ನಿಮ್ಮ ಜತೆ ದೊಡ್ಡ ಯುವ ಪಡೆ ಇದೆ. ಕುಮಾರಣ್ಣ ಮುಖ್ಯಮಂತ್ರಿಯಾಗಬೇಕೆಂದು ಅವರೆಲ್ಲ ಹಂಬಲಿಸುತ್ತಿದ್ದಾರೆ. ನೀವು ಇನ್ನಷ್ಟು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಬೇಕು’ ಎಂದು ಹುರಿದುಂಬಿಸಿದರು.
ಪಕ್ಷದ ರಾಜ್ಯ ಅಧ್ಯಕ್ಷ ಎ.ಕೃಷ್ಣಪ್ಪ, ಶಾಸಕರಾದ ವೈ.ಎಸ್.ವಿ.ದತ್ತ, ಬಿ.ಬಿ.ನಿಂಗಯ್ಯ, ಮುಖಂಡರಾದ ಬಾಲಕೃಷ್ಣೇಗೌಡ, ಡೇವಿಡ್ ಸೀಮೋನ್, ಎಚ್.ಟಿ.ರಾಜೇಂದ್ರ, ಎಸ್.ಎಲ್.ಧರ್ಮೇಗೌಡ, ಎಚ್.ಎಚ್.ದೇವರಾಜ್, ಎಚ್.ಎಸ್.ಮಂಜಪ್ಪ ಹಾಗೂ ಇನ್ನಿತರ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.