ಚಳ್ಳಕೆರೆ: ತಾಲ್ಲೂಕಿನ ಸಾಣಿಕೆರೆ ಗ್ರಾಮದ ಆಶಾ ಕಾರ್ಯಕರ್ತೆ ಶಿವಲೀಲಾ (38) ಅವರು ಶನಿವಾರ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ಸೆಪ್ಟೆಂಬರ್ 24ರಂದು ಶೀವಲೀಲಾ ಅವರಿಗೆ ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿತ್ತು. ಶುಕ್ರವಾರ ಅವರನ್ನು ಕೂಡಲೇ ಚಳ್ಳಕೆರೆಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ರ್ಯಾಪಿಡ್ ಪರೀಕ್ಷೆ ನಡೆಸಲಾಗಿತ್ತು.
ಬರೀ ಜ್ವರ ಹೊರತುಪಡಿಸಿದರೆ ಯಾವುದೇ ಸೋಂಕಿನ ಲಕ್ಷಣಗಳು ವರದಿಯಲ್ಲಿ ಕಂಡು ಬಂದಿರಲಿಲ್ಲ. ಶೀವಲೀಲಾ ಅವರಿಗೆ ಮನೆಯಲ್ಲಿಯೇ ನೀಡಲಾಗಿತ್ತು. ರಕ್ತದ ಒತ್ತಡ ಕಡಿಮೆಯಾಗಿ ಶನಿವಾರ ಶೀವಲೀಲಾ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ತಾಲ್ಲೂಕು ಆಡಳಿತಾಧಿಕಾರಿ ಡಾ.ಪ್ರೇಮಾಸುಧಾ ತಿಳಿಸಿದರು.
ಶೀವಲೀಲಾ ಅವರಿಗೆ ಪತಿ, ಮಗಳು ಹಾಗೂ ಮಗ ಇದ್ದಾರೆ.
ಶನಿವಾರ ಸಾಣಿಕೆರೆಯಲ್ಲಿ ನಡೆದ ಆಶಾ ಕಾರ್ಯಕರ್ತೆ ಶಿವಲೀಲಾರವರ ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಆಡಳಿತಾಧಿಕಾರಿ ಡಾ. ಎಲ್. ಪಾಲಾಕ್ಷ, ತಮಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ಆರೋಗ್ಯ ಇಲಾಖೆ ಆರೋಗ್ಯಾಧಿಕಾರಿ ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು.
ಆಶಾ ಕಾರ್ಯಕರ್ತೆ ಶೀವಲೀಲಾ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ನಲ್ಲಿ ಭರವಸೆ ನೀಡಿದ್ದಾರೆ.