ಚಿತ್ರದುರ್ಗ: ಬಸವಣ್ಣನವರು ದೇವರಲ್ಲ, ಮಾನವ ಮಾತ್ರ. ಕಾರ್ಯಗಳಿಂದ ಅವರು ದೈವತ್ವಕ್ಕೆ ಏರಿದ್ದಾರೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಅಭಿಪ್ರಾಯಪಟ್ಟರು.
ಇಲ್ಲಿನ ಮುರುಘಾ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಶುಕ್ರವಾರ ಸರಳವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಶರಣರು, ಸಂತರ ಹಾಗೂ ದಾರ್ಶನಿಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
‘ಬಸವಣ್ಣ ಅವರು ಸಾಮಾನ್ಯ ಸಮಸ್ಯೆಗಳನ್ನು ಕೈಗೆತ್ತಿಗೊಂಡು ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದರು. ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅದಕ್ಕೆ ಪರಿಹಾರ ಸೂಚಿಸುವ ದಾರ್ಶನಿಕರಾದರು. ಲಿಂಗ ತಾರತಮ್ಯ ಮತ್ತು ಅಸ್ಪೃಶ್ಯತೆ ನಿವಾರಣೆಗೆ ಕ್ರಾಂತಿಗೆ ಧುಮುಕಿದರು. ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸ ಮಾಡಿದರು’ ಎಂದು ಹೇಳಿದರು.
‘ರೂಪಾಂತರ ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸಿದೆ. ಎಲ್ಲಿ ನೋಡಿದರೂ ಸಾವಿನ ಸುದ್ದಿ ಹರಿದಾಡುತ್ತಿದೆ. ಆಪ್ತರನ್ನು ಕಳೆದುಕೊಳ್ಳುತ್ತಿದ್ದೇವೆ. ದುಃಖದ ಕಾರ್ಮೋಡ ದೇಶವನ್ನು ಕಾಡುತ್ತಿದೆ’ ಎಂದರು.
ಫಾದರ್ ಎಂ.ಎಸ್. ರಾಜು, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಕುಂಬಾರ ತಿಪ್ಪೇಸ್ವಾಮಿ ಸ್ವಾಮೀಜಿ, ಇಮ್ಮಡಿ ಬಸವ ಮೇದರ ಕೇತಯ್ಯ ಸ್ವಾಮೀಜಿ, ವೀರಶೈವ ಸಮಾಜ ಅಧ್ಯಕ್ಷ ಎಲ್.ಬಿ. ರಾಜಶೇಖರ್, ಹಜರತ್ ಓಬೇದ್ ಅಲಿಷಾ ಖಾದ್ರಿ ದರವೇಶ್ ಇದ್ದರು.
‘ಮಾನವೀಯತೆ ಮಹಾಮೂರ್ತಿ’
ಜಗತ್ತಿನ ಎಲ್ಲ ಧರ್ಮಗಳ ಸಾರ ಬಸವಣ್ಣನವರ ವಚನಗಳಲ್ಲಿದೆ. ಭೂಮಂಡಲದ ಮಾನವೀಯತೆಯ ಮಹಾಮೂರ್ತಿ ಬಸವಣ್ಣ ಎಂದು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಭೋವಿಗುರುಪೀಠದಲ್ಲಿ ಏರ್ಪಡಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ‘ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಲಿಂಗಧಾರಣೆ ಮಾಡುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಮುಂದಾದರು. ಗುಡಿ ಸಂಸ್ಕೃತಿ ಹಾಗೂ ಪುರೋಹಿತಶಾಹಿ ವಿರುದ್ಧ ಚಳವಳಿ ನಡೆಸಿದರು. ಅವರಲ್ಲಿ ವಚನಕಾರ, ಪರಿಸರವಾದಿ, ನ್ಯಾಯವಾದಿ, ವ್ಯಕ್ತಿತ್ವ ವಿಕಾಸಕರನ್ನು ಕಾಣಬಹುದು’ ಎಂದು ಹೇಳಿದರು.
***
ಬಸವಣ್ಣ ಎಲ್ಲರನ್ನು ತೆಕ್ಕೆಗೆ ತಂದುಕೊಂಡವರು. ಅಸಮಾನತೆ, ಅಸ್ಪಶ್ಯತೆ ವಿರುದ್ಧ ಚಳವಳಿ ಮಾಡಿದರು. ಅವರ ಶಿವಯೋಗವನ್ನು ಮುರುಘಾ ಶರಣರು ಮುಂದುವರಿಸಿದ್ದಾರೆ.