ಹಿರಿಯೂರು: ಬಯಲು ಸೀಮೆಯ ಜನರ ದಶಕಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆಯ ವಾಸ್ತವ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ತಾಲ್ಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭವಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ 2008 ರಲ್ಲಿ ಅನುಮೋದನೆ ಸಿಕ್ಕಿತ್ತು. ಇಷ್ಟು ವರ್ಷವಾದರೂ ಜನಪ್ರತಿನಿಧಿಗಳು ಆಗ ಪೂರ್ಣಗೊಳ್ಳುತ್ತದೆ ಎಂದು ಭರವಸೆ ನೀಡುತ್ತಲೇ ಬಂದಿದ್ದಾರೆ. ಇನ್ನೂ ಪೂರ್ಣಗೊಂಡಿಲ್ಲ. ಜನಪ್ರತಿನಿಧಿಗಳ ಭರವಸೆಗಳನ್ನು ನಂಬಿ ನಂಬಿ ಸಾಕಾಗಿದ್ದು, ಶ್ವೇತಪತ್ರಕ್ಕೆ ಹೊರಡಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆಗೆ 376 ನೇ ವಿಧಿ ಜೆ ಪ್ರಕಾರ ವಿಶೇಷ ಪ್ರಾತಿನಿಧ್ಯ ಕೊಡಬೇಕು. ವಾಣಿ ವಿಲಾಸ ಜಲಾಶಯದಿಂದ ಫೆಬ್ರುವರಿಯಲ್ಲಿ ನೀರು ಹರಿಸಬೇಕು. ದೊಡ್ಡ ಮತ್ತು ಸಣ್ಣ ರೈತರೆಂಬ ತಾರತಮ್ಯ ಮಾಡದೆ ಬೆಳೆ ಪರಿಹಾರ ವಿತರಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರ ಹಕ್ಕುಪತ್ರ ವಿತರಿಸಬೇಕು. ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಪುನಾರಂಭಿಸಬೇಕು. ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಮಾರ್ಚ್ ಮೊದಲ ವಾರ ನೀರು:
ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಭದ್ರಾ ಮೇಲ್ದಂಡೆ ಯೋಜನೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಪಾಳೇಗಾರ್, ‘ರೈಲ್ವೆ ಹಳಿಯ ಕೆಳಗೆ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಒಂದೆರಡು ಸಮಸ್ಯೆಗಳು ಬಾಕಿ ಇದ್ದು, ಮಾರ್ಚ್ ಮೊದಲ ವಾರ ವಾಣಿ ವಿಲಾಸ ಜಲಾಶಯಕ್ಕೆ ಭದ್ರೆಯ ನೀರು ಹರಿಸುತ್ತೇವೆ’ ಭರವಸೆ ನೀಡಿದರು.
ತಹಶೀಲ್ದಾರ್ ವೆಂಕಟೇಶಯ್ಯ ಧರಣಿ ನಿರತರ ಜತೆ ಕುಳಿತು ಸಮಸ್ಯೆ ಆಲಿಸಿ, ಸರ್ಕಾರಕ್ಕೆ ಹೋರಾಟದ ಬಗ್ಗೆ ಮಾಹಿತಿ ನೀಡುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕಸವನಹಳ್ಳಿ ರಮೇಶ್, ಆರ್. ಜಗನ್ನಾಥ್, ಆರ್. ಮಂಜುನಾಥ್, ಮೇಟಿಕುರ್ಕೆ ಜಯ್ಯಣ್ಣ, ತಿಪ್ಪೇಸ್ವಾಮಿ, ದೊಡ್ಡಗಟ್ಟ ಕುಮಾರ್, ಚಳ್ಳಕೆರೆ ತಿಪ್ಪೇಸ್ವಾಮಿ, ಪ್ರಾಂತ ಅಧ್ಯಕ್ಷ ರಾಜೇಂದ್ರ ಪಾಲ್ಗೊಂಡಿದ್ದರು.