ಪರಶುರಾಂಪುರ: ಹೂಳು ತುಂಬಿಕೊಂಡಿದ್ದ ನಾರಾಯಣ ಬಲದಂಡೆ ತೂಬನ್ನು ಸ್ವಚ್ಛಗೊಳಿಸಿದ ಟಿ.ಎನ್.ಕೋಟೆ ಗ್ರಾಮಸ್ಥರು ಮತ್ತು ಭಗತ್ ಸಿಂಗ್ ಯುವ ಪಡೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ವೇದಾವತಿ ನದಿಗೆ ವಾಣಿವಿಲಾಸ ಸಾಗರಿಂದ ನೀರು ಬಿಟ್ಟಿದ್ದು, ಹಿರಿಯೂರು ತಾಲ್ಲೂಕಿನ ಶಿಡ್ಲಯ್ಯನಕೋಟೆ ಬ್ಯಾರೆಜ್ ಭಾನುವಾರ ತಲುಪಿದೆ. ಟಿ.ಎನ್.ಕೋಟೆಯ 150 ಗ್ರಾಮಸ್ಥರು ಭಾನುವಾರ ಹೂಳು ತೆಗೆಯುವ ಮೂಲಕ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟರು.
20 ವರ್ಷಗಳಿಂದ ಕಾಲುವೆಯಲ್ಲಿ ಹೂಳು ತುಂಬಿಕೊಂಡು ಕೆರೆಗಳಿಗೆ ನೀರು ಹರಿಯದೆ ಒಣಗಿ ಹೋಗಿದ್ದವು. ಅಂತರ್ಜಲ ಮಟ್ಟವು ಕುಸಿದಿತ್ತು. ಈಗ ನೀರು ಸರಾಗವಾಗಿ ಹರಿದು ಕೆರೆಯನ್ನು ಸೇರುತ್ತಿದೆ. ಇದರಿಂದ ಕೊಳವೆಬಾವಿಗಳಲ್ಲಿ ನೀರು ಬರಲಿದೆ. ಜನ–ಜಾನುವಾರುವಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಕೃಷಿ ಚಟುವಟಿಕೆಗೂ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.