ಚಳ್ಳಕೆರೆ: ಪೊಲೀಸ್ ಪೇದೆಯೊಬ್ಬರು ಆರೋಗ್ಯದ ಕಾರಣ ಕರ್ತವ್ಯಕ್ಕೆ ರಜೆ ಹಾಕಿ ಬೆಂಗಳೂರಿನಿಂದ ಶನಿವಾರ ರಾತ್ರಿ ಉರಿಗೆ ಮರಳಿ ಬಂದು ಮನೆಯ ಪ್ರತ್ಯೇಕ ಗುಡಿಸಲಿನಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು.
ಸಂಬಧಿಕರು ಆತನಿಗೆ ಮಲಗಿದ್ದ ಗುಡಿಸಲ ಬಳಿಯೇ ಊಟ ನೀಡಿದ್ದನ್ನು ಗನಮನಿಸಿದ ಸುತ್ತ ಮುತ್ತಲ ಜನರು, ಸೋಂಕಿರುವ ಕಾರಣ ಆತನನ್ನು ಪ್ರತ್ಯೇಕವಾಗಿಯೇ ಇಟ್ಟಿದ್ದಾರೆ ಎಂದು ಶಂಕಿಸಿ ಕೊರೊನಾ ಪೀಡತನೆಂದು ನಗರದ ಬಡಾವಣೆಯಲ್ಲಿ ವದಂತಿ ಹಬ್ಬಿಸಿದರು.
ಬೆಳಿಗ್ಗೆ ವಾಕಿಂಗ್ ಹೋದ ಜನರು ಅಲ್ಲಲ್ಲಿ ಗುಂಪು ಕಟ್ಟಿ ಶಂಕಿತ ಪೇದೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಈ ವಾರ್ಡ್ನಲ್ಲಿ ವ್ಯಾಪಕವಾಗಿ ವದಂತಿ ಹಬ್ಬಿದ ಕಾರಣ ಭೀತರಾದ ಜನ ಭಾನುವಾರ ಇಲ್ಲಿನ ಗಾಂಧಿನಗರದ ಕೊರಚರಹಟ್ಟಿಯ ಶಂಕಿತ ಪೇದೆಯ ಮನೆ ಮುಂದೆ ಆತನ ಬಟ್ಟೆಗೆ ಬೆಂಕಿಹಚ್ಚಿ ಪ್ರತಿಭಟಿಸಿದರು.
ಕೂಲಿ ಕೆಲಸಕ್ಕೆ ಬೆಂಗಳೂರಿಗೆ ಹೋದ ವ್ಯಕ್ತಿ ಪೇದೆ ಎಂದು ಸುಳ್ಳು ಹೇಳಿಕೊಳ್ಳುತ್ತಿದ್ದಾನೆ ಎಂದು ಜನ ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರನ್ನು ಚದುರಿಸಿದ ಪೋಲಿಸರು: ಸುದ್ದಿ ತಿಳಿದ ಕೂಡಲೇ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಗುಂಪು ಗುಂಪಾಗಿ ಸೇರಿದ್ದ ಜನರನ್ನು ಚದುರಿಸಿದರು.
ಶಂಕಿತ ಪೇದೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.